Sunday, September 11, 2016

ಕುವೆಂಪು ಅವರ ಕಾನೂರು ಹೆಗ್ಗಡಿತಿ


ನಾನು ಓದಿದ ಮೊದಲ ಕನ್ನಡ ಕಾದಂಬರಿ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಮಾಧ್ಯಮಿಕ ಶಾಲೆಯಲ್ಲಿ  ಓದುತ್ತಿದ್ದಾಗ  ಬೇಸಿಗೆ ರಜೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಣ್ಣಿಗೆ ಬಿದ್ದ ಈ ಪುಸ್ತಕವನ್ನು ಓದಲು ಆರಂಭಿಸಿ, ಎರವಲು ಪಡೆದು ಮನೆಗೂ ತಂದು ಓದಿ ಮುಗಿಸಿದ್ದು ನೆನಪಿದೆ. ಸುಮಾರು ಆರು ನೂರು ಪುಟಗಳ ಕಾದಂಬರಿ ಓದಿ ಮುಗಿಸಲು ಬಹುಶಃ ಆ ರಜೆಯ ಬಹುಭಾಗವೇ ಹಿಡಿದಿರಬೇಕು. ಈಗ ಹತ್ತು ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಕಾದಂಬರಿಯ ಸ್ವಾರಸ್ಯಕಡಿಮೆಯಾದಂತೆ ಅನಿಸಲಿಲ್ಲ.

೧೯೩೬ರಲ್ಲಿ ಪ್ರಕಟವಾದ ಈ ಕಾದಂಬರಿಯು ಒಳಗೊಳ್ಳುವ ಪರಿಸರ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಎಂಬ ಹೆಸರಿನಿಂದ ಗುರುತಿಸಲ್ಪಡುವ ಪ್ರದೇಶ. ನನ್ನ ಊರು ಅದೇ ಪ್ರದೇಶದಲ್ಲಿರುವುದರಿಂದ ಈ ಕಾದಂಬರಿಯಲ್ಲಿ ವರ್ಣನೆಗೊಳ್ಳುವ ಹಲವಾರು ಸ್ಥಳ ಹಾಗೂ ವ್ಯಕ್ತಿಚಿತ್ರಗಳು ನಮಗೆಲ್ಲ ಹೊಸತಾಗಿರಲಿಲ್ಲ. ಆದರೂ ಆ ಕಾರಣಕ್ಕಾಗಿ ಕಾದಂಬರಿಯ ಸ್ವಾರಸ್ಯ ನನಗೇನೂ ಕಡಿಮೆಯಾಗಿರಲಿಲ್ಲ.  ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಪ್ರಪಂಚ. ಕುವೆಂಪು ಅವರಂತಹ ಕಲ್ಪನೆ, ಒಳನೋಟ, ಜೀವನ ಪ್ರೀತಿ ಎಲ್ಲವೂ ಬೆರೆತ ಕೃತಿಕಾರನ ಲೇಖನಿಯಲ್ಲಿ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ನಿಂತಷ್ಟು ನೈಜತೆಯಲ್ಲಿ ಮೂಡಿ ಬರುತ್ತದೆ.

ಕಾದಂಬರಿಯ 'ಅರಿಕೆ'ಯಲ್ಲಿ ಕುವೆಂಪು ಅವರೇ ಹೇಳಿರುವಂತೆ 'ಕಾದಂಬರಿ ಅಂಗೈ ಮೇಲಣ ನಾಟಕಶಾಲೆ'. ವಿಧ ವಿಧದ ದೃಶ್ಯಗಳ, ವ್ಯಕ್ತಿಗಳ, ಸನ್ನಿವೇಶಗಳ ಪೂರ್ಣ ಸ್ವಾರಸ್ಯ ಸಿಗಲು ಅವುಗಳು ಓದುವವರ ಪ್ರತಿಭೆಯಲ್ಲಿ ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, ಕಳೆದ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನೆಲೆಯಲ್ಲಿ ಈ ಕಾದಂಬರಿಯ ಓದುಗರು ಗ್ರಹಿಸಬಹುದು. ಜಮೀನುದಾರಿಕೆಯ ದರ್ಪ, ಅಧಿಕಾರದ ಪ್ರತಿನಿಧಿಯಂತಿರುವ ಕಾನೂರು ಚಂದ್ರಯ್ಯಗೌಡರ ಕುಟುಂಬವು ಕತೆಯ ಕೇಂದ್ರಬಿಂದು. ಈ ಕುಟುಂಬದ ಒಳಗಿನ ಹಾಗೂ ಹೊರಗಿನ ಸಂಬಂಧಗಳು ಅಂದಿನ ಕಾಲದ ಕೌಟುಂಬಿಕ ಹಾಗೂ ಸಾಮೂಹಿಕ ಜೀವನದ ಪ್ರತಿಮೆಗಳಾಗಿ ಕಾಣಬರುತ್ತವೆ.

ಕಾದಂಬರಿಯ ಕಡೆಯಲ್ಲಿ ಒದಗಿಸಿರುವ ಅನುಬಂಧ-೩ ರಲ್ಲಿ ಕಾದಂಬರಿಯ ಪಾತ್ರಗಳ ಪರಿಚಯ ಇದೆ. ಇದರಲ್ಲಿ ಚಂದ್ರಯ್ಯಗೌಡರ ಪರಿಚಯ  ಹೀಗಿದೆ: ಕಾನೂರು ಮನೆತನದ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಗತಿಸಿದ ಮೇಲೆ ಈತನೇ ಮನೆಯ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಸಾಯುವಾಗ ಅವರಿಗೂ ಚಂದ್ರಯ್ಯಗೌಡರಿಗೂ ಮನಸ್ತಾಪವಿತ್ತು. ಹಾಗಾಗಿ ಅಣ್ಣನ ಮಗ ಹೂವಯ್ಯ ಮತ್ತು ಅತ್ತಿಗೆ ನಾಗಮ್ಮನವರ ಬಗ್ಗೆ ಅನಾದರ. ಮೊದಲ ಇಬ್ಬರು ಹೆಂಡತಿಯರು ಗತಿಸಿದ ಮೇಲೆ ನೆಲ್ಲುಹಳ್ಳಿಯ ಸುಬ್ಬಮ್ಮನನ್ನು ಮೂರನೆಯ ಹೆಂಡತಿಯಾಗಿ ತಂದರು.

ಕಾದಂಬರಿಯ ಶೀರ್ಷಿಕೆಯ ಪಾತ್ರ ಇದೇ ಸುಬ್ಬಮ್ಮನದು. ತನ್ನ ಕಾರ್ಯ ಸಾಧನೆಗೆ ಕುಟಿಲ ಮಾರ್ಗವನ್ನು ಹಿಡಿಯಲು ಹಿಂಜರಿಯದ ಹೆಂಗಸು ಸುಬ್ಬಮ್ಮ. ಗಂಡನ ಸಾವಿನ ನಂತರ ಮನೆಯಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಹೊರಡುವ ಈಕೆ ಒಬ್ಬ ಉದ್ವಿಗ್ನ ವ್ಯಕ್ತಿತ್ವದ ದುಡುಕಿನ ಮಹಿಳೆಯಾಗಿ ಕಾಣಬರುತ್ತಾಳೆ.

೧೯೯೯ರಲ್ಲಿ ಗಿರೀಶ್ ಕಾರ್ನಾಡರು ನಿರ್ದೇಶಕರಾಗಿ ತೆರೆಗೆ ತಂದ  ಇದೇ ಕಾದಂಬರಿ ಆಧಾರಿತ ಚಲನಚಿತ್ರವು ಈ ಬೃಹತ್ ಕಾದಂಬರಿಯ ಸಂಪೂರ್ಣ ಪರಿಚಯ ಮಾಡಿಸದಿದ್ದರೂ ಚಂದ್ರಯ್ಯಗೌಡನಾಗಿ ಕಾರ್ನಾಡರ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ.  ಉತ್ತರ ಕರ್ನಾಟಕ ಮೂಲದ ಕಾರ್ನಾಡರ ಮಾತಿನ ಶೈಲಿ ಮಲೆನಾಡು ಗೌಡರ ಮಾತಿನ ಶೈಲಿಗೆ  ಹೊಂದಿಕೆಯಾಗದಿದ್ದರೂ ಭಾವಾಭಿನಯವು ನನ್ನ ಕಲ್ಪನೆಯ ಕಾದಂಬರಿಯ ಪಾತ್ರಕ್ಕೆ ತುಂಬಾ ಹೊಂದಿಕೆಯಾಗುತ್ತಿತ್ತೆಂದು ನೆನಪು.

ಈ ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರವೆಂದರೆ ಹೂವಯ್ಯ. "ತನ್ನ ಸುಶಿಕ್ಷಿತತೆ, ಆಧ್ಯಾತ್ಮಿಕತೆ ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಾನೆ" ಎಂದು ಆತನ ಪಾತ್ರದ ಬಗೆಗೆ ಅನುಬಂಧದಲ್ಲಿ ನಮೂದಾಗಿದೆ.

ಕಾದಂಬರಿಯುದ್ದಕ್ಕೂ ಅಂದಿನ ಮಲೆನಾಡಿನ ಬದುಕಿನ ಸಹಜ ಚಟುವಟಿಕೆಗಳಾದ ಮೀನು ಹಿಡಿಯುವುದು, ಹಂದಿ ಶಿಕಾರಿ, ಕಳ್ಳು ಕಟ್ಟುವುದು, ಮರ ಕುಯ್ಯುವುದು, ದಯ್ಯದ ಹರಕೆ, ಭೂಮಿ ಹುಣ್ಣಿಮೆಯಂತಹ ಹಬ್ಬಗಳು ಇತ್ಯಾದಿಗಳ ವರ್ಣನೆಗಳು ಅತ್ಯಂತ ಪ್ರಭಾವಯುತವಾಗಿವೆ. ಚಿಕ್ಕಪುಟ್ಟ ಸಂಗತಿಗಳೂ ವಿವರಗಳೊಂದಿಗೆ ದಾಖಲಾಗಿವೆ.

ಲಿಯೋ ಟಾಲ್ ಸ್ಟಾಯ್ ಬರೆದ 'ಆನಾ ಕರೆನಿನಾ' ಓದುವಾಗಲೂ ಇದೇ ಬಗೆಯ ಓದಿನ ಅನುಭವವಾದದ್ದು ನೆನಪಾಗುತ್ತದೆ. ತೋಟದಲ್ಲಿ ಹುಲ್ಲು ಕತ್ತರಿಸುವ ವಿವರಣೆಗೇ ಟಾಲ್ ಸ್ಟಾಯ್ ಒಂದೆರಡು ಅಧ್ಯಾಯಗಳನ್ನೇ ಮೀಸಲಿಟ್ಟಿರುವುದು, ಹಾಗೆಯೇ ಅದೇ ಕಾದಂಬರಿಯಲ್ಲಿ ಬರುವ ಬೇಟೆಯ ದೀರ್ಘ ವಿವರಣೆ- ಇವೆಲ್ಲ ಇಂತಹ ಕಾದಂಬರಿಗಳಲ್ಲಿ ಬಾಹ್ಯ ಚಟುವಟಿಕೆಗಳ ವಿವರಣೆಗಳೂ ಭಾವ ಪ್ರಪಂಚದ ವಿವರಣೆಗಳಂತೇ  ಹೇಗೆ ಮುಖ್ಯವಾಗುತ್ತವೆಂಬುದನ್ನು  ತೋರುತ್ತವೆ.

ಇಂತಹ ಕಾದಂಬರಿಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಒಂದು ಸಮೂಹದ ಜೀವನದ ಒಂದೊಂದು ಅನುಭವಗಳನ್ನೂ ಅತ್ಯಂತ ಆಸಕ್ತಿಯಿಂದ, ಸಹಾನುಭೂತಿಯಿಂದ ಗಮನಿಸುವ ಕೃತಿಕಾರರು ಓದುಗರಿಗೆ ಒದಗಿಸುವುದು ಒಂದು ಜೀವನಕ್ರಮದ ಸಮಗ್ರ ಚಿತ್ರವನ್ನು. ವ್ಯಕ್ತಿಗತ ಮನೋಸ್ಥಿತಿ, ಸಾಮಾಜಿಕ ಸ್ಥಿತಿ ಎಲ್ಲವೂ ಕೃತಿಯ ಭಾಗಗಳಾಗುತ್ತವೆ.

ಕಾನೂರು ಹೆಗ್ಗಡತಿ ಕಾದಂಬರಿಯು ಅಂದಿನ ಮಲೆನಾಡಿನ ಜೀವನಕ್ರಮವನ್ನು ಪ್ರತಿಫಲಿಸುತ್ತಾ ಜಡ್ಡು ಹಿಡಿದ ಹಲವು ಆಚರಣೆಗಳು, ನಂಬಿಕೆಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವನ್ನು ತೋರಿಸುತ್ತದೆ. ಹೂವಯ್ಯನ ಪಾತ್ರ ಹಲವು ಸಂದರ್ಭಗಳಲ್ಲಿ ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವುದು ಈ ಬದಲಾವಣೆಗಳ ಮಾರ್ಗ ಸೂಚನೆಯಂತೇ ತೋರುತ್ತದೆ.

"ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ, ಸಾವಧಾನವಾಗಿ ಸಚಿತ್ರವಾಗಿ ಓದಿ" ಎಂದು ಕುವೆಂಪು ಅವರು 'ಅರಿಕೆ'ಯಲ್ಲಿ ಹೇಳಿದ್ದರೂ 'ಕಾನೂರು ಹೆಗ್ಗಡಿತಿ' ಯ ಕಥೆಯೂ, ಕಥೆಯೊಳಗಿನ ಉಪಕಥೆಗಳೂ ಸಹ ತೀವ್ರವಾದ ಒಂದು ಅನುಭವಕ್ಕೆ ಪೂರಕವಾಗುತ್ತವೆ.

ಹೂವಯ್ಯ-ಸೀತೆಯರ ತಣ್ಣನೆಯ ಹಾಗೂ ಅಂತಿಮವಾಗಿ ದುರಂತಮಯವಾದ ಪ್ರೇಮದ ಕಥೆಯು  ಕಾನೂರು ಹೆಗ್ಗಡಿತಿಯ ನವಿರಾದ ಕಥಾ ಸೆಲೆಗಳಲ್ಲೊಂದು. ಈ ಬೃಹತ್ ಕಾದಂಬರಿಯ ಅನೇಕ ಆಕರ್ಷಣೆಗಳ ಒಂದು ಸಣ್ಣ ಮಾದರಿಯಾಗಿ, ಹೂವಯ್ಯ-ಸೀತೆಯರ ಪ್ರೇಮಕಥೆಯು ಅನಾವರಣಗೊಳ್ಳುವ ಕಾದಂಬರಿಯ ಕೆಲ ಭಾಗಗಳನ್ನು ಇಲ್ಲಿ ಉಲ್ಲೇಖಿಸಬಹುದು-

ಸುಸಂಸ್ಕೃತೆ, ರೂಪವತಿ ಹಾಗೂ ಭಾವಜೀವಿಯಾದ ಸೀತೆ ಹೂವಯ್ಯನನ್ನು ಬಾಲ್ಯದಿಂದಲೂ ಮೆಚ್ಚಿಕೊಳ್ಳುತ್ತಾ, ತನ್ನ ಯೌವ್ವನದಲ್ಲೂ ಅವನನ್ನೇ ಆರಾಧಿಸುವಳು. ಇದು ಅನಾವರಣಗೊಳ್ಳುವ ಕೆಲ ಘಟನಾವಳಿಗಳು ಹೀಗಿವೆ-

ಸೀತೆ (ಅಧ್ಯಾಯ ನಾಲ್ಕು)-
ಹೂವಯ್ಯ ಭಾವ ಬರುವರೆಂದು ಸಡಗರ, ಸಂಭ್ರಮ. ಎಳೆಯ ದಿನಗಳಲ್ಲಿ ಇಬ್ಬರೂ ಆಟ ಪಾಠಗಳಲ್ಲಿ ಬೆರೆತು ಕಾಲ ಕಳೆದದ್ದು , ಸೀತೆ ವಧುವಾಗಿ ಹೂವಯ್ಯ ವರನಾಗಿ ಮದುವೆಯ ಆಟ ಆಡಿದ್ದು ನೂತನ ವಧುವರರು ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಗೆ ಮೇಳಿಗೆ ತೇರಿಗೆ ಹೋಗಿಬಂದದ್ದು, ಬಟ್ಟೆ ಸುತ್ತಿ ಮಗುವೆಂದು ನಲಿದದ್ದು, ಗಂಡ ಹೂವಯ್ಯ ಮುನಿದದ್ದು ರಾಮಯ್ಯ ಜಗಳ ಬಿಡಿಸಿದ್ದು ಎಲ್ಲ ನೆನಪಾಗುವುದು. ಸಂಭ್ರಮದಿಂದ ತಾಯಿಗೆ ಹೋಳಿಗೆ ಮಾಡಲು ನೆರವಾಗುವಳು.

ಬರುತ್ತಿರುವ ಹೂವಯ್ಯನನ್ನು ಮೆಚ್ಚಿಸಲು ಅಲಂಕಾರದಲ್ಲಿ ತೊಡಗುವಳು, ಮುಚ್ಚಿರುವ ಬಾಗಿಲ ಆಚಿನಿಂದ ಅವಳ ಪುಟ್ಟ ತಂಗಿ ಲಕ್ಷ್ಮಿ ತಾನೂ ಒಳಗೆ ಬರುವೆನೆಂದು ಗಲಾಟೆ ಮಾಡಿದಾಗ ಅವಳನ್ನು ಮುದ್ದು ಮಾಡಿ ನಿನಗೂ ತಲೆ ಬಾಚಿ ಹೂ ಮುಡಿಸುತ್ತೇನೆಂದು ಹೇಳಿ ಇವತ್ತು ಹೂವಯ್ಯ ಭಾವ ಬರುತ್ತಾರೆ ಎಂದು ಲಕ್ಷ್ಮಿಗೂ ಹೇಳುವಳು.

ಬರುತ್ತಿರುವಾಗ ಗಾಡಿ ಉರುಳಿ ಬಿದ್ದು ಬೆನ್ನು ನೋವು ಮಾಡಿಕೊಂಡಿದ್ದ ಹೂವಯ್ಯನಿಗೆ ನರ್ಸಮ್ಮನಾಗಿ ಶುಶ್ರೂಷೆ ಮಾಡುವಳು.

ಹಲ್ಲಿಯ ಕೃಪೆ (ಅಧ್ಯಾಯ ಹದಿನೈದು)-
ಮುತ್ತಳ್ಳಿಯಲ್ಲಿ ಸುಧಾರಿಸಿಕೊಳ್ಳುತ್ತಿದ್ದ ಹೂವಯ್ಯನನ್ನು ಜಗಲಿಯಲ್ಲಿ ಗದ್ದಲ ಎಂದು ಸೀತೆಯ ಅಲಂಕಾರದ ಕೋಣೆಯಲ್ಲಿ ಮಲಗಿಸಿರುತ್ತಾರೆ. ಇಬ್ಬರೇ ಕೋಣೆಯಲ್ಲಿರುವಾಗ ಸೀತೆಗೆ ಮಾತನಾಡಬೇಕೆಂಬ ಕುತೂಹಲ. ಆದರೆ ಸಂಕೋಚ, ಲಜ್ಜೆ, ಭಯ. ಹೂವಯ್ಯನ ಪರಿಸ್ಥಿತಿಯೂ ಅಂತಹುದೇ. ಈ ನಡುವೆ ಗೋಡೆಯಲ್ಲಿ ಕುಳಿತಿದ್ದ ಹಲ್ಲಿಯೊಂದು ಮುಂದಕ್ಕೆ ಚಲಿಸಿತು. ಆಗ ಅದು ಕುಳಿತಿದ್ದ ಜಾಗ ತೆರವಾಯಿತು. ಅಲ್ಲಿ "ನಾನು ಹೂವಯ್ಯ ಭಾವನನ್ನೇ ಮದುವೆಯಾಗುತ್ತೇನೆ" ಎಂದು ಸೀಸದ ಕಡ್ಡಿಯಲ್ಲಿ ಬರೆದಿದ್ದ ಬರಹ ಹೂವಯ್ಯನ ಕಣ್ಣಿಗೆ ಬಿತ್ತು. ಅದು ಸೀತೆಯದೇ ಅಕ್ಷರ ಎಂಬುದು ಹೂವಯ್ಯನಿಗೆ ತಿಳಿಯಿತು. ಸೀತೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಆತನಿಗೆ ಸ್ಪಷ್ಟವಾಯಿತು.

ಸೀತೆ-ಹೂವಯ್ಯ (ಇಪ್ಪತ್ತನೆಯ ಅಧ್ಯಾಯ)-
ಸೀತೆ, ಹೂವಯ್ಯ ಹೇಳಿದಂತೆ ಅವನ ಟ್ರಂಕಿನಿಂದ ಭಾರಭಾರವಾದ ಬಣ್ಣ ಬಣ್ಣದ ಹೊದಿಕೆ ಇರುವ ಇಂಗ್ಲಿಷ್ ಪುಸ್ತಕಗಳನ್ನು ಹೊತ್ತುತಂದು ಹೆತ್ತ ತಾಯಿ ತನ್ನ ಮಗುವನ್ನು ಗಂಡನಿಗೆ ನೀಡುವಂತೆ ಒಂದು ವಿಧದ ಧನ್ಯತಾಭಾವ ಮತ್ತು ಅರ್ಪಣಾಭಾವದಿಂದ ಹೂವಯ್ಯನಿಗೆ ನೀಡಿದಳು. ಹೂವಯ್ಯನು ಒಂದು ಚರಿತ್ರೆಯ ಪುಸ್ತಕವನ್ನು ಸೀತೆಯ ಕೈಗೆ ಕೊಟ್ಟು ಇವುಗಳಲ್ಲಿರುವ ಚಿತ್ರಗಳನ್ನು ನೋಡುತ್ತಿರು ಎಂದು ಹೇಳಿ ತಾನು ಕಾವ್ಯ ಪುಸ್ತಕವೊಂದನ್ನು ಓದಲು ತೊಡಗಿದನು.

ಇನ್ನು ಹೂವಯ್ಯನ ವಿಚಾರಕ್ಕೆ ಬಂದರೆ, ಅದೇಕೋ ಹೂವಯ್ಯ ಪ್ರೇಮದ ಅನುಭವಕ್ಕೆ ತನ್ನನ್ನು  ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದಿಲ್ಲ. ಆರಂಭದಿಂದಲೇ ಅವನಲ್ಲಿ ಮಾನಸಿಕ ಸಮರವೇರ್ಪಡುತ್ತದೆ. ಹೂವಯ್ಯನ ಮನೋಭಾವ ವ್ಯಕ್ತವಾಗುವುದು ಹೀಗೆ-

ಹಲ್ಲಿಯ ಕೃಪೆ (ಅಧ್ಯಾಯ ಹದಿನೈದು)-
ಒಮ್ಮೆ ಆಕೆಗಾಗಿ ಸಂಸಾರದ ಭಾರವನ್ನು ಹೊರುವುದು ಅಷ್ಟೇನೂ ಹೀನವಲ್ಲ, ನಷ್ಟಕರವಲ್ಲ ಎಂದು ಆಲೋಚಿಸಿದನು. ಮತ್ತೊಮ್ಮೆ ತನ್ನ ಮಹದಾಕಾಂಕ್ಷೆಯ ಆದರ್ಶ ಅವನನ್ನು ತನ್ನೆಡೆಗೆ ಸೆಳೆಯುತ್ತಿತ್ತು.

ರುದ್ರವಾದರೂ ಮಧುರ ರಾತ್ರಿ (ಅರವತ್ತೊಂಬತ್ತನೇ ಅಧ್ಯಾಯ)-
ಮೊದಲು ತಾನು ವಿದ್ಯಾವಂತನಾಗಬೇಕು, ಪ್ರತಿಭಾಶಾಲಿಯಾಗಬೇಕು, ಕೀರ್ತಿ ಸಂಪಾದಿಸಬೇಕು, ಲೋಕದ ಮಹಾಪುರುಷರಂತಾಗಬೇಕು, ಸ್ವಾರ್ಥ ತ್ಯಾಗದಿಂದ ಜೀವನವನ್ನು ಪರಮ ಸಾರ್ಥಕತೆಗೆ ಬಲಿದಾನ ಕೊಡಬೇಕು - ಎಂಬ ಹೆಗ್ಗನಸು.

ಮುಂದೆ ಹೂವಯ್ಯ-ಸೀತೆಯರ ಸಂಬಂಧ ಪಡೆಯುವ ತಿರುವೂ ಅನಿರೀಕ್ಷಿತ. ಇವರ ಪ್ರೇಮದ ಕಥೆಯು  ಕಾದಂಬರಿಯ ಒಂದು ಪುಟ್ಟ ಭಾಗ ಮಾತ್ರ.

ಶತಮಾನದಷ್ಟು ಹಳೆಯದಾದರೂ  ತನ್ನದೇ ವಿಶಿಷ್ಟತೆ ವೈವಿಧ್ಯತೆಗಳ 'ಕಾನೂರು ಹೆಗ್ಗಡಿತಿ'ಯ ಮಲೆನಾಡಿನ ಲೋಕಕ್ಕೆ ಪ್ರವೇಶಿಸ ಬಯಸುವವರಿಗೆ ಅಂದಿನ  ಜನರ ಸಹಜತೆಯ, ಸರಳತೆಯ, ಸುಂದರತೆಯ  ಒಂದು ಕಿರುನೋಟವನ್ನು ಒದಗಿಸುವುದು  ಈ ಮೇಲಿನ ಭಾಗಗಳನ್ನು  ಉಲ್ಲೇಖಿಸಿದ  ಉದ್ದೇಶವಾಗಿದೆ. ಇನ್ನು ಕಾದಂಬರಿಯನ್ನು ವಿಮರ್ಶೆಯ ಒರೆಗೆ ಹಚ್ಚಿ, ಇದನ್ನು ಮಹಿಳಾವಾದ, ವರ್ಣ ವಿಚಾರ, ವರ್ಗ ಸಂಘರ್ಷ ಇತ್ಯಾದಿ ಮಜಲುಗಳಿಂದ  ನೋಡುವುದೂ ಸಾಧ್ಯವಿದ್ದರೂ ಅದು ಈ ಬರಹದ ಉದ್ದೇಶವಲ್ಲ.

ಈಚೆಗೆ ನಮ್ಮ ಪತ್ರಿಕೆಗಳು, ಮಾಧ್ಯಮ, ಸಿನಿಮಾ, ಸಾಹಿತ್ಯ ಎಲ್ಲವೂ ನಗರಗಳಿಂದ ದೂರವಿರುವ ಬಹುಸಂಖ್ಯೆಯ ಜನರ ಜೀವನಶೈಲಿ, ಪರಂಪರೆ ಇವುಗಳನ್ನೆಲ್ಲ ಒಳಗೊಳ್ಳುವುದೇ ಇಲ್ಲ. ಮಾರುಕಟ್ಟೆ ಆಧಾರಿತ ಆದ್ಯತೆ ಇದಕ್ಕೆ ಕಾರಣ ಇರಬಹುದು. ಅದೇನೇ ಇರಲಿ ಆಧುನಿಕತೆಯು ನಮ್ಮದೇ ನಾಡಿನ ಒಂದು ಭಾಗದ ಜನಸಮೂಹದಲ್ಲಿ ತಂದ  ಬದಲಾವಣೆಯ ಚಿತ್ರಣವನ್ನು ಒದಗಿಸುವ 'ಕಾನೂರು ಹೆಗ್ಗಡಿತಿ' ಯಂತಹ ಕಾದಂಬರಿಗಳು ಇಂದಿಗೂ ಮುಖ್ಯ ಎಂಬುದು ನನ್ನ ನಂಬಿಕೆ.

Saturday, May 28, 2016

ಇಂಟರ್ನೆಟ್ ಯುಗದಲ್ಲಿ ಪುಸ್ತಕ ಪ್ರೀತಿ

ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ
ಅವು ಇಣುಕುತ್ತವೆ,
ದಿಟ್ಟಿಸುತ್ತವೆ ಎಷ್ಟೋ ಆಸೆಯಿಂದ.
ಈಗ ತಿಂಗಳಾನುಗಟ್ಟಲೆ ಭೇಟಿಯಾಗುವುದಿಲ್ಲ ನಾವು
ಅವುಗಳ ಜೊತೆ ಉತ್ಕಟತೆಯಲಿ
ಕಳೆದ ಸಂಜೆಗಳೀಗ
ಕಂಪ್ಯೂಟರಿನ ಪರದೆಯ ಮುಂದೆ ಸರಿಯುತ್ತಿವೆ.
ಖ್ಯಾತ ಹಿಂದಿ ಕವಿ ಗುಲ್ಜಾರ್ ರ ಕವಿತೆಯೊಂದರ ಕನ್ನಡ ಅನುವಾದವಾದ  'ಪುಸ್ತಕಗಳು' ಕವಿತೆಯ ಸಾಲುಗಳಿವು. ಲೇಖಕಿ ಸಂಧ್ಯಾರಾಣಿ ಯವರ ಅನುವಾದ ಗುಲ್ಜಾರ್ ರ ಸಾಲುಗಳ ಸೂಕ್ಷ್ಮ ಸಂವೇದನೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದೆ .

ಹೊಸ ಕಾಲಮಾನದ ಹೊಸ ತಂತ್ರಜ್ಞಾನ  ಸಾಧ್ಯವಾಗಿಸಿರುವ  ಸಾಧನಗಳ ನಡುವೆ ಹಿನ್ನಡೆಗೆ ಸರಿಯುತ್ತಿರುವ ತಮ್ಮ ಭಾವ ಪ್ರಪಂಚದ ಭಾಗವೊಂದನ್ನು ನೆನೆದು ಕವಿ ಪಡುತ್ತಿರುವ ವಿಷಾದವಷ್ಟೇ ಇದಲ್ಲ. ಪುಸ್ತಕದ ಓದು ನೀಡುವ ಮುದವನ್ನು ಎಂದಾದರೂ ಅನುಭವಿಸಿರುವ ಎಲ್ಲರ ಮನದ  ಭಾವವೂ ಈ ಸಾಲುಗಳಲ್ಲಿದೆ.

ಹೀಗಾದದ್ದಾದರೂ ಹೇಗೆ?

ಕಳೆದೆರಡು ದಶಕಗಳಲ್ಲಿ ತಂತ್ರಜ್ಞಾನ ತಂದೊಡ್ಡಿರುವ ಬದಲಾವಣೆಗಳು ಅಚ್ಚರಿಗೊಳಿಸುತ್ತವೆ.  ಬೆರಳೆಣಿಕೆಯ ಟೆಲಿವಿಷನ್ ಚಾನೆಲುಗಳು , ಮನೆಗೊಂದೇ ಟೆಲಿಫೋನು ಇದ್ದ ದಿನಗಳಲ್ಲಿ  ಪುಸ್ತಕವೊಂದರಲ್ಲಿ ಮುಳುಗಿ ಹೋಗುವುದು ಸುಲಭದ ಮಾತಾಗಿತ್ತು. ಅದೇ ಇಂದಿನ ಕಾಲದಲ್ಲಿ ಮೊಬೈಲು, ಯೂಟ್ಯೂಬು, ನೂರಾರು ಟೆಲಿವಿಷನ್ ಚಾನಲುಗಳು, ೩ಡಿ  ಸಿನಿಮಾ, ಕಂಪ್ಯೂಟರ್ ಗೇಮುಗಳು ಇತ್ಯಾದಿಗಳಲ್ಲಿ ಪುಸ್ತಕಗಳೆಲ್ಲೋ  ಮರೆಯಾಗಿವೆ. 'ಪುಸ್ತಕ ಓದಲು ಇಷ್ಟ ಆದರೆ ಸಮಯವೇ ಸಿಗುತ್ತಿಲ್ಲ' ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ.

ಇಂಟರ್ನೆಟ್ಟಿನಲ್ಲಿ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯ ಮೇಲೆ ಓದುವುದಕ್ಕೂ, ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.  ಪುಸ್ತಕಗಳ ಪರ ಮತ್ತು ಇಂಟರ್ನೆಟ್ಟಿನ ವಿರುದ್ಧ ಮಾತಾಡುವುದು ಕೆಲವರಿಗೆ ಬರಿಯ ನಾಸ್ಟಾಲ್ಜಿಯ ಅನಿಸಲೂಬಹುದು. ಹಿಂದೆಂದೋ ಲಂಕೇಶ್ ಪತ್ರಿಕೆಯಲ್ಲಿ ಓದಿದ್ದ ಚಂದ್ರಶೇಖರ ಆಲೂರರ ಲಲಿತ ಪ್ರಬಂಧ (ಇದು ಇಂಟರ್ನೆಟ್, ಬ್ಲಾಗಿಂಗ್  ಇತ್ಯಾದಿ ಬರುವುದಕ್ಕೂ ಮೊದಲು) ನೆನಪಿಗೆ ಬರುತ್ತದೆ. "ತುರುಬ ನೆನೆಯುವ ಜಮಾನದ ಜನ" ಎಂದೇನೋ ಅದರ ಶೀರ್ಷಿಕೆ ಇತ್ತೆಂದು ನೆನಪು. ಪ್ರತಿಯೊಂದು ತಲೆಮಾರಿನವರು ತಮ್ಮ ಅನುಭವಗಳು, ತಮ್ಮ ಕಾಲದ ರೀತಿಗಳು ಶ್ರೇಷ್ಟ ಎಂದು ಭಾವಿಸುವುದರ ಬಗ್ಗೆ ಅವರು ಬರೆದಿದ್ದರು. ಈ ಬಗೆಯ ಯೋಚನೆಗೆ ಸುಪ್ತವಾಗಿ ನಮ್ಮಲ್ಲಿರುವ ಸ್ವಮೋಹವೇ ಕಾರಣವಿರಬಹುದೇನೋ ಎಂದೂ ಅವರು ಬರೆದಿದ್ದರು.

ಮಧ್ಯವಯಸ್ಕನ ನಾಸ್ಟಾಲ್ಜಿಯವು ಹೊಸ ತಲೆಮಾರಿನ  ಅಭಿರುಚಿಗಳ ತುಲನೆಯಲ್ಲಿ ತೊಡಕಾಗಬಾರದೆಂಬ  ಎಚ್ಚರಿಕೆಯಿಂದಲೇ ಓದಿನ ಮೇಲೆ ಇಂಟರ್ನೆಟ್ಟಿನ ಪರಿಣಾಮವನ್ನು ಗಮನಿಸುವ ಪ್ರಯತ್ನಕ್ಕೆ ತೊಡಗುತ್ತಿದ್ದೇನೆ.

ಇಂಟರ್ನೆಟ್ ಎಂದರೆ ಲೋಕದ ವಿಚಾರವೆಲ್ಲವನ್ನೂ ಲಾಳಿಕೆಯೊಂದರಲ್ಲಿ ಹಿಡಿದು ನೇರ ಮಿದುಳಿಗೆ ರವಾನಿಸುವ ವ್ಯವಸ್ಥೆ.  ಇಲ್ಲಿ ಓದುವುದೆಂದರೆ ಓದುವುದಕ್ಕಿಂತ ಪರದೆಯ ಮೇಲೆ ವೇಗವಾಗಿ ಮೂಡುವ ಮಾಹಿತಿಯ ಝರಿಯನ್ನು ಅನುಸರಿಸುವುದಷ್ಟೇ. ಅದಕ್ಕೇ ಇಲ್ಲಿ ರೀಡಿಂಗ್ ಎಂಬ ಶಬ್ದಕ್ಕೆ ಪರ್ಯಾಯವಾಗಿ ಬ್ರೌಸಿಂಗ್, ಸ್ಕಿಮ್ಮಿಂಗ್ ಇತ್ಯಾದಿ ಪದಗಳ ಬಳಕೆ ಮಾಡುವುದು ಸಾಮಾನ್ಯ. ಇಲ್ಲಿ ತಕ್ಷಣದಲ್ಲಿ, ಸುಲಭದಲ್ಲಿ  ಮಾಹಿತಿ ಲಭ್ಯವಾಗಿಸುವ ಸೌಲಭ್ಯಕ್ಕೆ ಪ್ರಾಧಾನ್ಯತೆ.

ಒಂದು ಪುಸ್ತಕದ ಓದು ನಮ್ಮಿಂದ ನಿರೀಕ್ಷಿಸುವುದೇ ಬೇರೆ. ಇಲ್ಲಿ ಓದಿದ್ದರ ಗ್ರಹಣ, ಮನನ, ಪ್ರತಿಫಲನ  ಎಲ್ಲವೂ ಅಗತ್ಯ. ಇದೊಂದು ಜೀವಂತ ವ್ಯಕ್ತಿಯೊಡನೆ ಸಂವಾದಿಸಿದಂತೆ.  ಸರಿಯಾಗಿ  ಪರಿಚಯವಾಗಲು, ಅರ್ಥವಾಗಲು  ಜೊತೆಯಲ್ಲಿ ಉತ್ಕಟತೆಯಲ್ಲಿ ಕಾಲ ಕಳೆಯಬೇಕಾಗುತ್ತದೆ.  ಪ್ರತಿಯೊಂದು ಉತ್ತಮ ಪುಸ್ತಕವೂ ನಮ್ಮ ಬಗ್ಗೆಯೇ ಒಂದಿಷ್ಟು ತಿಳಿದುಕೊಳ್ಳುವ ಅವಕಾಶವಾಗಿರುತ್ತದೆ. ಕೃತಿಕಾರರ ಯೋಚನೆ, ಭಾವನೆ, ಕಾಳಜಿಗಳು ಅವರನ್ನು ನಮಗೆ ಪರಿಚಯಿಸುವುದರೊಂದಿಗೆ ಅವರೊಂದಿಗೆ ನಾವು ಒಪ್ಪುವ ಅಥವಾ ಒಪ್ಪದಿರುವ ಕ್ರಿಯೆಯಲ್ಲಿ ನಮಗೇ ನಮ್ಮ ಪರಿಚಯವೂ ಸಾಧ್ಯವಾಗುತ್ತದೆ.

ಇಂಟರ್ನೆಟ್ ಓದಿನ ಇನ್ನೊಂದು ತೊಡಕೆಂದರೆ ಅದು ಒದಗಿಸುವ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಇತ್ಯಾದಿ ಸಮೂಹ ಮಾಧ್ಯಮಗಳು. ಇಷ್ಟೊಂದು ಆಯ್ಕೆಗಳು ಕಣ್ಣ ಮುಂದಿರುವಾಗ ತಲ್ಲೀನತೆಯಿಂದ ಏನನ್ನೂ ಓದಿ ಮುಗಿಸುವುದು ಸುಲಭವಲ್ಲ.  ಹಾಗೆಯೇ ಓದುತ್ತಿರುವ ಲೇಖನ/ಕೃತಿಗೆ ಸಂಬಂಧಿಸಿದ ಇತರ ಹತ್ತು ಹಲವು ಮಾಹಿತಿಗಳೂ ಬೆರಳ ತುದಿಯಲ್ಲೇ ಲಭ್ಯವಿರುವುದೂ ಅನುಕೂಲದಂತೇ  ಅನಾನುಕೂಲವೂ ಆಗಿಬಿಡಲು ಸಾಧ್ಯ. ಯಾವುದೋ ಮಾಹಿತಿಯನ್ನು ಹುಡುಕಲು ಹೊರಟು ಕೊಂಡಿಯಿಂದ ಕೊಂಡಿಗೆ ಹಾರುತ್ತಾ, ಹುಡುಕಲು ಹೊರಟ ವಿಚಾರವನ್ನೇ ಮರೆಯುವ ಸಾಧ್ಯತೆಯೂ ಇದ್ದೇ  ಇರುತ್ತದೆ.

ಕಲ್ಪನೆಗೂ ನಿಲುಕದ ವೇಗದಲ್ಲಿ ಸೃಷ್ಟಿಯಾಗುತ್ತಿರುವ ಮಾಹಿತಿ ಮತ್ತು ಜ್ಞಾನದ ಶೋಧನೆ ಮತ್ತು ಬಳಕೆಗೆ ಇಂಟರ್ನೆಟ್ ಒಂದೇ ಉಳಿದಿರುವ ಮಾರ್ಗ ಎಂದು ಹೇಳುವವರು ಇದ್ದರೂ ಅದೇ ಪರಮ ಸತ್ಯವೂ ಅಲ್ಲ. ಇಂಟರ್ನೆಟ್ ನ  ವಿಶಾಲ ನಭದಲ್ಲಿ ಹರಿದಾಡುತ್ತಿರುವುದೆಲ್ಲ ಮಥಿಸಿ ತಂದ ನವನೀತವೇನಲ್ಲ.  ಯಾವುದೇ ವಿಮರ್ಶೆಗೆ ಸಂಶೋಧನೆಗೆ ಒಳಪಡದ ಗಾಳಿ ಮಾತುಗಳೂ, ಹಸಿ ಸುಳ್ಳುಗಳೂ ಇಲ್ಲಿವೆ. ಅಪಕ್ವವಾದ, ಬಾಲಿಶವಾದ ವಿಚಾರಗಳಿಗೂ ಕೆಲವೊಮ್ಮೆ ಇದು ವೇದಿಕೆ. ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ ಟ್ವಿಟರ್ ಇದಕ್ಕೊಂದು ಉದಾಹರಣೆ. ದಶಕಗಳ ಕಾಲ ಅಧ್ಯಯನ, ಸಂಶೋಧನೆ, ವಿಚಾರ ವಿಮರ್ಶೆಯ ಹಿನ್ನೆಲೆ ಇರುವವರಿಗೂ ಇಲ್ಲಿ ಕೆಲವೊಮ್ಮೆ ಕಾಸಿನ ಕಿಮ್ಮತ್ತೂ ಸಿಗದೇ ಹೋಗುವುದುಂಟು. ಯಾವುದೇ ಓದಿನ, ವಿಚಾರವಂತಿಕೆಯ ಅಪವಾದವೂ ಇಲ್ಲದ ಘೋಷಣಾ ಜೀವಿಗಳಿಗೂ ದೊಡ್ಡದೊಂದು ಧ್ವನಿವರ್ಧಕ ಇಲ್ಲಿ ಲಭ್ಯವಿರುವುದೂ ಒಂದು ವಿಪರ್ಯಾಸ.

ಇದೆಲ್ಲ ನೋಡಿದರೆ ನಾವಿಂದು ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ ಇಣುಕುತ್ತಿರುವ, ನಾವು ಮರೆತಿರುವ ಪುಸ್ತಕಗಳತ್ತ ಮತ್ತೆ ಹೋಗುವ ಅಗತ್ಯ ಕಾಣುತ್ತಿದೆ.  ಇಂಟರ್ನೆಟ್ ನಲ್ಲಿ ಧಾರಾಳ ಲಭ್ಯವಿರುವ ಒಂದಕ್ಕೊಂದು ಸಂಬಂಧವೇ ಇರದಂತೆ ಹರಿದಾಡುತ್ತಿರುವ ಮಾಹಿತಿಯ ಬಿಡಿ ತುಂಡುಗಳಿಂದ ಹೆಚ್ಚಿನ ಲಾಭವಿಲ್ಲ. ಎಲ್ಲ ಕಾಲದ ಮಾನವ ಅಭಿವ್ಯಕ್ತಿಯ ಮುಖ್ಯ ದಾಖಲೆಯಾಗಿರುವ ಸಾಹಿತ್ಯವು ಮತ್ತೆ ನಮಗೆ ಹತ್ತಿರವಾಗಬೇಕಾದ ತುರ್ತು ಅಗತ್ಯ ಇದೆ. ಎಲ್ಲ ಉತ್ತರಗಳನ್ನೂ ತನ್ನಲ್ಲಿಟ್ಟುಕೊಂಡಿರುವ ಇಂಟರ್ನೆಟ್ ನ ಜೊತೆಗೇ ಪುಟ ಪುಟದಲ್ಲೂ ಪ್ರಶ್ನೆಗಳನ್ನು ಮೂಡಿಸುತ್ತ ಜಿಜ್ಞಾಸೆಗೆ ಹಚ್ಚುವ ಪುಸ್ತಕಗಳೂ ನಮಗೆ ಬೇಕು.

ಪುಸ್ತಕವನ್ನು ಪ್ರೀತಿಸುವವರು ಸಂಗ್ರಹಿಸುವವರು ಹಲವರು ಇದ್ದಾರೆ. ಬಹುಪಾಲು ಸಾಹಿತಿಗಳು ಈ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ.  ನನಗೆ ತಿಳಿದಂತೆ ಈಚಿನ ಕನ್ನಡದ ಮುಖ್ಯ ಕತೆಗಾರ, ಕಾದಂಬರಿಕಾರರಾಗಿರುವ ವಿವೇಕ್ ಶಾನಭಾಗ್ ಅವರಲ್ಲೊಬ್ಬರು. ಅವರು ಏಳು ವರ್ಷಗಳ ಕಾಲ ಯಶಸ್ವಿಯಾಗಿ, ಅಚ್ಚುಕಟ್ಟಾಗಿ ಹೊರತಂದ ವಿಶಿಷ್ಟ ಕನ್ನಡ ತ್ರೈಮಾಸಿಕ ಪತ್ರಿಕೆ 'ದೇಶ ಕಾಲ'ದ ಆರಂಭದ ದಿನಗಳಲ್ಲಿ ಚಂದಾ ಹಣ ತಲುಪಿಸುವುದಕ್ಕಾಗಿ ನಾನೊಮ್ಮೆ ಅವರ ಮನೆಗೆ ಹೋಗಿದ್ದೆ. ಗೋಡೆಯುದ್ದಕ್ಕೂ ಕಪಾಟುಗಳಲ್ಲಿ ಜೋಡಿಸಿಟ್ಟಿದ್ದ ಅವರ ಅಪಾರ ಪುಸ್ತಕ ಸಂಗ್ರಹ ನೋಡಿ ದಂಗಾಗಿದ್ದು ನನಗಿನ್ನೂ ನೆನಪಿದೆ. ಕೆಲ ತಿಂಗಳುಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ವಿವೇಕ್ ಅವರು 'ದೇಶ ಕಾಲ' ಪತ್ರಿಕೆ ಹೊರತರುವಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಂದು ಪುಸ್ತಕ ಅಥವಾ ಪತ್ರಿಕೆಗೆ ಅದರ ವಿನ್ಯಾಸ, ಅದು ಅಚ್ಚಾಗುವ ಕಾಗದ, ಕೈಯಲ್ಲಿ ಹಿಡಿಯುವ ಅನುಭವ, ಅದರ ವಾಸನೆ, ಸ್ಪರ್ಶ ಎಲ್ಲವೂ ಹೇಗೆ ಮುಖ್ಯವಾಗುತ್ತದೆ ಎಂದು ವಿವರಿಸಿದರು. ನಿಜಕ್ಕೂ ದೇಶ ಕಾಲ ಆ ಎಲ್ಲ ದೃಷ್ಟಿಯಿಂದ ಅದ್ಭುತವಾದ ಪತ್ರಿಕೆಯಾಗಿತ್ತು. ಅದೇ ಸಂದರ್ಭದಲ್ಲಿ ವಿವೇಕ್ ತಮ್ಮ ಮಾತುಗಳಲ್ಲಿ ಕೀರಂ ನಾಗರಾಜರ ಪ್ರಸ್ತಾಪ ಮಾಡಿದರು. ಪುಸ್ತಕದೊಂದಿಗೆ ಕೀರಂ ಅವರು ಹೊಂದಿರುತ್ತಿದ್ದ ಸಂಬಂಧ, ಅದರಲ್ಲಿ ಅವರು ಟಿಪ್ಪಣಿ ಮಾಡುತ್ತಿದ್ದದ್ದು, ಪುಸ್ತಕವೆಂದರೆ ಜೀವ ಇರುವ ವಸ್ತು ಎನ್ನುವ ರೀತಿಯ ಒಡನಾಟ ಇರುತ್ತಿದ್ದದ್ದು ಇದೆಲ್ಲವನ್ನೂ ಅವರು ಹೇಳಿದರು .

'ಪುಸ್ತಕ ಓದಲು ಇಷ್ಟ ಆದರೆ ಸಮಯವೇ ಸಿಗುತ್ತಿಲ್ಲ' ಎನ್ನುವವರು ಕಪಾಟುಗಳ ಬೀಗ ತೆಗೆದು ಹಿಂದೆಂದೋ ಓದಿ, ಅಥವಾ ಓದದೆಯೇ ಪೇರಿಸಿಟ್ಟಿರುವ ಕತೆ, ಕಾವ್ಯ, ಕಾದಂಬರಿ, ಆತ್ಮ ಚರಿತ್ರೆ ಇತ್ಯಾದಿ ಪುಸ್ತಕಗಳೊಡನೆ ಮತ್ತೊಮ್ಮೆ ಉತ್ಕಟತೆಯಲ್ಲಿ ಸಮಯ ಕಳೆಯುವ ಪ್ರಯತ್ನ ಮಾಡಬೇಕಿದೆ. ಕಾರಂತ, ಕುವೆಂಪು, ಅನಂತ ಮೂರ್ತಿ, ಲಂಕೇಶ್, ತೇಜಸ್ವಿ, ಚಿತ್ತಾಲ ಹೀಗೇ ಈ ನಾಡಿನ ಪ್ರತಿಭಾವಂತ ಮಹನೀಯರ ವೈಚಾರಿಕತೆ, ಜೀವನ ದೃಷ್ಟಿ, ನೈತಿಕ ಪ್ರಜ್ಞೆ ಮತ್ತೊಮ್ಮೆ ನಮ್ಮ ಸಮೂಹ ಪ್ರಜ್ಞೆಯೊಳಗೆ ಸೇರಬೇಕಾಗಿದೆ. ಅವರ ಕೃತಿಗಳು, ಕಾದಂಬರಿಗಳು ಗತಕಾಲದ ಕತೆ ಹೇಳುವವಾದರೂ, ಅಲ್ಲಿನ ಪಾತ್ರಗಳ ಸಮಸ್ಯೆಗಳು ನಮ್ಮ ಸಮಸ್ಯೆಗಳಾಗಿರದಿದ್ದರೂ, ಅಂದಿನ ಜೀವನದ ಸ್ಮೃತಿಯನ್ನು ಕಾಯ್ದಿಡುವುದು, ಅದರಿಂದ ಕಲಿಯುವುದು ಎಲ್ಲವೂ ಮುಖ್ಯ. ನಿತ್ಯಜೀವನದಲ್ಲಿ ನಾವು ಕಾಣುವುದು ಜನರ ಮೇಲ್ನೋಟ ಮಾತ್ರ. ಅದೇ ಒಂದು ಕತೆ ಅಥವಾ ಕಾದಂಬರಿಯಲ್ಲಿ ಜನರ ಮನಸ್ಸು, ಆಲೋಚನೆಗಳು, ಪ್ರಚೋದನೆಗಳು ಎಲ್ಲವನ್ನೂ ಕಾಣಲು ಸಾಧ್ಯವಿದೆ. ಎಲ್ಲ ಕಾಲದ ಜನರ ಎಲ್ಲ ಅನುಭವಗಳೂ ಸಹ ಮನುಷ್ಯರಾಗಿರುವುದೆಂದರೆ ಏನು ಎಂಬುದನ್ನು ಅರಿಯಲು ಸಹಾಯ ಮಾಡುತ್ತವೆ. ಹಲವು ಪ್ರತಿಭೆಗಳ ವರ್ಷಗಳ ಪ್ರಯತ್ನದ ಫಲವಾದ ಸಾಹಿತ್ಯ ಕೃತಿಗಳು ಜೀವನದ ಸೌಂದರ್ಯವನ್ನು ಸಂಭ್ರಮಿಸುವುದನ್ನು   ಕಲಿಸಲೂ ಶಕ್ತವಾಗಿರುತ್ತವೆ.

ಇಂಟರ್ನೆಟ್ ನ ಎಕ್ಸ್ ಪ್ರೆಸ್ ವೇ ನಲ್ಲಿ ವೇಗದಲ್ಲಿ  ನಿರರ್ಥಕವಾಗಿ ಜಾರುತ್ತ ಸಾಗುತ್ತಿರುವ ನಾವು, ಪುಸ್ತಕದ ದಟ್ಟ ಅರಣ್ಯದಲ್ಲೂ ಹೊಕ್ಕು ನೀರವದಲ್ಲಿ ಮೌನದಲ್ಲಿ ಅಚ್ಚರಿಯ ದೃಶ್ಯಗಳನ್ನು ನೋಡಬೇಕಿದೆ.