Sunday, June 29, 2014

ಅಮೃತ ಬಳ್ಳಿಯ ಕಷಾಯ

"ಅನಿಸುತಿದೆ ಯಾಕೋ ಇಂದು ... "

ಜನಪ್ರಿಯ ಕನ್ನಡ ಚಲನ ಚಿತ್ರ "ಮುಂಗಾರು ಮಳೆ" ಯ ಗೀತೆಯ ಈ ಸಾಲಿನ ಪರಿಚಯವಿರದವರು ಯಾರಿದ್ದಾರೆ. ಈ ಗೀತೆಯ ರಚನಕಾರರಾಗಿ ಒಮ್ಮೆಗೇ ಎಲ್ಲರ ಮನ್ನಣೆಗೆ ಪಾತ್ರರಾದವರು  ಜಯಂತ ಕಾಯ್ಕಿಣಿಯವರು. ಅದಕ್ಕೂ ಮೊದಲು ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದಲೂ  ಕವಿಯಾಗಿ, ಕತೆಗಾರರಾಗಿ ಅವರು ಉತ್ಕೃಷ್ಟ ಸಾಹಿತ್ಯದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದರೂ ಯಾಕೋ ಹೆಚ್ಚು ಚರ್ಚೆಗೆ  ಒಳಗಾಗಿರಲಿಲ್ಲ. ನನಗಂತೂ ಅವರು ಮೊದಲು ಪರಿಚಯವಾದದ್ದು, ಇಷ್ಟವಾದದ್ದು ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಕತೆಗಾರರಾಗಿಯೇ. ಜಯಂತರದ್ದೊಂದು ಸಣ್ಣ ಕತೆಗಳ ಸಂಕಲನ "ಅಮೃತ ಬಳ್ಳಿಯ ಕಷಾಯ"  ಕೃತಿಯನ್ನು ಮೊನ್ನೆ ಓದಿದೆ. ಅದು ಅವರು ತೊಂಬತ್ತರ ದಶಕದಲ್ಲಿ ಬರೆದ ಕತೆಗಳ ಸಂಗ್ರಹ. ಓದಿ ಮುಗಿಸಿದಾಗ ಈ ವಿಶಿಷ್ಟ ಕತೆಗಾರನ ಪ್ರತಿಭೆಯ ಬಗ್ಗೆ ಅಚ್ಚರಿಯೆನಿಸಿತು. ಅವರ ಕತೆಗಳ  ಪ್ರಪಂಚ ಮೊದಲಿಗೆ ಪರಿಚಯವಾದದ್ದರ ನೆನಪು ಮರುಕಳಿಸಿತು.

ಇದು ನನ್ನಂತಹ ಬಹಳ ಮಂದಿ ಕನ್ನಡಿಗರ ಅನುಭವವೂ  ಇರಬಹುದು. ಬಹಳ ವರ್ಷಗಳ ಹಿಂದೆ, ಆಗಿನ್ನೂ ಪುಸ್ತಕ, ಪತ್ರಿಕೆಗಳನ್ನು ಓದುವುದನ್ನು ಆರಂಭಿಸಿದ ದಿನಗಳು. ಮನೆಯಲ್ಲಿ ನಿಯಮಿತವಾಗಿ ತರಿಸುತ್ತಿದ್ದ ವಾರಪತ್ರಿಕೆಗಳೆಂದರೆ ಸುಧಾ ಮತ್ತು ಪ್ರಜಾಮತ. ಸುಧಾದಲ್ಲಿ ಸರಣಿಯ ರೂಪದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ  ಕಾರ್ಟೂನ್ ಸರಣಿಗಳು ನಮಗೆಲ್ಲ ಮುದ್ರಣ ಲೋಕದೊಂದಿಗಿನ ಮೊದಲ ಕೊಂಡಿಗಳು. ಅಲ್ಲಿಂದ ಆರಂಭಿಸಿ ನಂತರ ಮಕ್ಕಳ ಕತೆಗಳು, ಪದಬಂಧ, ಹೀಗೇ ಒಂದೊಂದಾಗಿ ನಮ್ಮ ಆಸಕ್ತಿಯ ವಸ್ತುಗಳು ವಿಸ್ತಾರವಾಗುತ್ತಿದ್ದವು. ಅಲ್ಲಿಂದ ಮುಂದೆ ಸಣ್ಣ ಕತೆಗಳು, ಧಾರಾವಾಹಿಗಳು ಪತ್ರಿಕೆಗಳಲ್ಲಿ ನಮ್ಮ ಓದಿನ ಭಾಗವಾದವು. ಪ್ರಕಟವಾಗುತ್ತಿದ್ದ ಸಣ್ಣ ಕತೆಗಳು, ಕಾದಂಬರಿ ಸರಣಿಗಳು ಜನಪ್ರಿಯ ಸಾಹಿತ್ಯದ ಮಾದರಿಯವು. ಇಂದಿನ ಟಿವಿ ಸೀರಿಯಲ್ಲುಗಳಂತೆ ಹೆಚ್ಚಾಗಿ ಕೌಟುಂಬಿಕ ವಸ್ತುಗಳನ್ನು ಆಧರಿಸಿದಂತವು ಮತ್ತು ಕೆಲವೊಮ್ಮೆ ಈ  ಕಾದಂಬರಿ ಸರಣಿಗಳು ರಸವೆಲ್ಲ ಮುಗಿದ ಮೇಲೂ ಜಗಿಯುತ್ತಲೇ ಹೋಗುವ ಚೂಯಿಂಗ್ ಗಮ್ಮಿನಂತೆ ನಿರಂತರ ಸಶೇಷವಾಗಿ ಇರುತ್ತಿದ್ದವು. 

ಇದೇ ಕಾಲಘಟ್ಟದಲ್ಲಿ ಉದಯವಾಣಿ ಸಮೂಹದಿಂದ ತುಷಾರ ಮಾಸ ಪತ್ರಿಕೆ ಪ್ರಕಟವಾಗಲು ಶುರುವಾಯಿತು. ತುಷಾರದ ಬರಹಗಳು ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿದ್ದ ನಮ್ಮ ಅರಿವಿಗೆ ನಿಲುಕುತ್ತಿದ್ದದ್ದು ಅಷ್ಟಕ್ಕಷ್ಟೇ. ಆದರೂ ಗಂಭೀರವಾದದ್ದೇನೋ ಇದರಲ್ಲಿದೆಯೆಂಬ ಕುತೂಹಲ ತುಷಾರ ಪತ್ರಿಕೆಯತ್ತ ಆಕರ್ಷಿಸುತ್ತಿತ್ತು. ತುಷಾರದಲ್ಲಿ ಪ್ರಕಟವಾಗುತ್ತಿದ್ದ ಸಣ್ಣಕತೆಗಳು ನಿಜಕ್ಕೂ ವಿಶಿಷ್ಟವಾಗಿರುತ್ತಿದ್ದವು. ಈ ಕತೆಗಳು ರಮ್ಯ ರಮಣೀಯವಾಗೇನೂ ಇರದಿರುತ್ತಿದ್ದರೂ ಅದೇಕೋ ಮನಸ್ಸಿಗೆ ತಟ್ಟುತ್ತಿದ್ದವು. ಆ ಕಾಲದಲ್ಲಿ ಓದಿದ ಈಶ್ವರಯ್ಯ ಅವರು ಬರೆದಿದ್ದ "ಓಡಿ ಹೋದವನು" ಎಂಬ ಕತೆ ಇಂದಿಗೂ ಅಸ್ಪಷ್ಟವಾಗಿ ನೆನಪಿದೆ. ಇಷ್ಟವಾಗುತ್ತಿದ್ದ ತುಷಾರದ ಇನ್ನೊಬ್ಬ ಲೇಖಕರೆಂದರೆ ಎಮ್. ವ್ಯಾಸ ಅವರು. ಅವರ ಕತೆಗಳ ಶೀರ್ಷಿಕೆಗಳು ಯಾವಾಗಲೂ ಎರಡಕ್ಷರದಲ್ಲಿರುತ್ತಿದ್ದದ್ದು ವಿಶೇಷ. ಅವರ ಬರವಣಿಗೆಯ ಶೈಲಿಯೂ ಬಹಳ ವಿಶಿಷ್ಟ.

ಇದೇ ಕಾಲಘಟ್ಟದಲ್ಲಿ ತುಷಾರ ಪತ್ರಿಕೆಯಲ್ಲಿ ಯುವ ಕತೆಗಾರರಾಗಿ  ಜಯಂತ ಕಾಯ್ಕಿಣಿಯವರೂ ಪರಿಚಯಗೊಂಡರು. ಅವರ ಮೊದಲ ಕತೆಗಳು ಅಷ್ಟಾಗಿ ನೆನಪಿಲ್ಲವಾದರೂ ನೆನಪಿರುವ ಒಂದು ವಿಚಾರವೆಂದರೆ ಅವರ ಕತೆಗಳು ಯಾವಾಗಲೂ  ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ಜೀವನ ವಿವರಗಳ ಕುರಿತೇ ಇರುತ್ತಿದ್ದವು. ಅಂದಿನ ದಿನಗಳಲ್ಲಿ ಸುಧಾ, ಪ್ರಜಾಮತದಂತಹ ಪತ್ರಿಕೆಗಳ ಕತೆಗಳ ಕಾದಂಬರಿಗಳ ನಾಯಕ ನಾಯಕಿಯರು ಸಮಾಜದ ಉಚ್ಛ ಸ್ತರದವರೇ ಆಗಿರುತ್ತಿದ್ದರು. ಈ ತುಷಾರದ ಕತೆಗಳ ಅದರಲ್ಲೂ ಜಯಂತರ ಕತೆಗಳ ಪಾತ್ರಗಳು ಮಾತ್ರ ಎಲ್ಲ ತಳುಕು ಬಳುಕು, ಹಣ ಅಂತಸ್ತಿನ ಹೊರಗೇ ಇರುತ್ತಿದ್ದವು. ನನ್ನ ಬಹಳ ಹಿಂದಿನ ಓದಿನ ಅಸ್ಪಷ್ಟ ನೆನಪುಗಳ ಆಧಾರದಲ್ಲೇ ಹೇಳಬಹುದಾದರೆ ವ್ಯಾಸರ ಕತೆಗಳಲ್ಲಿ ವ್ಯಕ್ತಿಯ ಆಳದ ಮನೋ ಪ್ರಪಂಚದ ಶೋಧ ಹೆಚ್ಚಾಗಿ ಇರುತ್ತಿತ್ತು. ಅದರಿಂದಲೇ ಶೀರ್ಷಿಕೆಗಳೂ ಹೆಚ್ಚಾಗಿ ವ್ಯಕ್ತಿ ವಿಶೇಷಣಗಳಾಗಿ ಇರುತ್ತಿದ್ದವು. ಕರ್ತ, ಗ್ರಸ್ತ, ವ್ಯಸ್ತ ಹೀಗೇ. ವ್ಯಾಸರ ಕತೆಗಳಲ್ಲಿ ದಕ್ಷಿಣ ಕನ್ನಡ ಪ್ರಾಂತ್ಯದ ಹಿನ್ನೆಲೆಯಿದ್ದರೆ  ಜಯಂತರ ಮೊದಲ ಕತೆಗಳೆಲ್ಲ ಉತ್ತರ ಕನ್ನಡ ಪ್ರಾಂತ್ಯದ ಹಿನ್ನೆಲೆಯವು.

ತುಷಾರದ ಓದಿನಿಂದ ಆರಂಭಿಸಿ ನಂತರದ ವರ್ಷಗಳಲ್ಲಿ ಹಲವು ಪತ್ರಿಕೆಗಳು, ವಿಶೇಷಾಂಕಗಳಲ್ಲಿ ಪ್ರಕಟವಾಗುತ್ತಿದ್ದ ಜಯಂತರ ಹಲವಾರು ಕತೆಗಳನ್ನು ಓದಿದ್ದೇನೆ. ಕಡೆಯಲ್ಲಿ ಯಾವುದೋ ಅನಿರೀಕ್ಷಿತ ತಿರುವೋ ಅಥವಾ ಚಕಿತಗೊಳಿಸುವ  ಘಟನೆಯೋ ಇನ್ನೇನನ್ನೋ ಬಳಸಿ ಆಕರ್ಷಿಸುವಂತಹ ಕತೆಗಳ ಮಾದರಿ ಜಯಂತರದ್ದು ಮೊದಲಿಂದ ಆಗಿರುತ್ತಿರಲಿಲ್ಲ. ಆದರೂ ಈ ಕತೆಗಳನ್ನು ಓದಬೇಕೆಂದು ನನಗೆ ಅನಿಸುತ್ತಿದ್ದದ್ದು ಯಾಕೆ ಎಂದು ಇಷ್ಟೊಂದು ವರ್ಷಗಳ ನಂತರ ಯೋಚಿಸಿದರೆ ಮುಖ್ಯವಾಗಿ ನೆನಪಾಗುವುದು ಅವರು ತಮ್ಮ ಎಲ್ಲ ಕತೆಗಳಲ್ಲೂ ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ನಮ್ಮದೇ ಸುತ್ತಲಿನ ಜೀವನದ ತುಣುಕು ಚಿತ್ರಗಳನ್ನು ಕಟ್ಟಿ ಕೊಡುವ ವಿಶಿಷ್ಟ ಶೈಲಿ.

ಇದೀಗ "ಅಮೃತ ಬಳ್ಳಿಯ ಕಷಾಯ" ಸಂಕಲನವನ್ನು ಓದುವಾಗ ಮತ್ತೊಮ್ಮೆ ಈ ಕತೆಗಾರನ ಮಾಂತ್ರಿಕ ಸ್ಪರ್ಶದ ಬಗೆಗೆ ಅಚ್ಚರಿಗೊಂಡಿದ್ದೇನೆ. ಸರಳವಾದ ಗದ್ಯದಲ್ಲಿ, ಆಡುಭಾಷೆಯ ನುಡಿಕಟ್ಟುಗಳಲ್ಲಿ, ಬೆರಗುಗೊಳಿಸುವಷ್ಟು ಸಮಂಜಸವಾದ ರೂಪಕಗಳಲ್ಲಿ ಅವರ ಕತೆಗಳು ಸೃಷ್ಟಿಯಾಗುತ್ತವೆ. ಏರಿಳಿತ, ತಿರುವು ಕಂದರಗಳಿಲ್ಲದೆ ಸಾಮಾನ್ಯ ಸನ್ನಿವೇಶಗಳ ಮೂಲಕ ಪಾತ್ರಗಳು ಶಕ್ತವಾಗಿ ರೂಪುಗೊಳ್ಳುತ್ತವೆ. ಈ ಸಂಕಲನದ ಮೊದಲ ಕತೆ "ಹಾಲಿನ ಮೀಸೆ"ಯಲ್ಲಿ ಬರುವ ಮನೆಗೆಲಸದ ಹುಡುಗ ಪುಂಡು (ಪುಂಡಲೀಕ ) ನಿಂದ ಹಿಡಿದು ಕೊನೆಯ ಕತೆ "ಅಮೃತ ಬಳ್ಳಿಯ ಕಷಾಯ"ದ ಫೋಟೋ ಫ್ರೇಮ್ ಅಂಗಡಿ ಗಂಗಾಧರನವರೆಗೂ ಪ್ರತಿ ಕತೆಯ ಪಾತ್ರಗಳೂ ನೆನಪಿನಲ್ಲುಳಿಯುವಂತವು. ಹಾಗೆಯೇ ಮೊದಲ ಕತೆಯಿಂದಲೇ ಗಮನಕ್ಕೆ ಬರುವ ಇನ್ನೊಂದು ಅಂಶವೆಂದರೆ ಚಿಕ್ಕ ಚಿಕ್ಕ ವಿವರಗಳ ಮೂಲಕ ಕತೆಯ ವಸ್ತು, ಆವರಣಗಳನ್ನು ಸಮರ್ಥವಾಗಿ ಕಟ್ಟುವ ಪರಿ. ಹೌದಲ್ಲ, ಇಂತಹದ್ದೆಲ್ಲ ನಾವು ಗಮನಿಸುವುದೇ ಇಲ್ಲವಲ್ಲ ಎಂದನಿಸುವಂತೆ ವಾಸ್ತವವನ್ನು ಬಿಡಿಸಿಡುವ ಅವರ ಕಲೆಗಾರಿಕೆ.

"ಮಿಥುನ್ ನಂಬರ್ ಟೂ", "ಚಂದಿರನೇತಕೆ ಓಡುವನಮ್ಮ" ಮುಂತಾದ ಕತೆಗಳು  ಬಡತನ, ಬವಣೆ, ಹತಾಶೆಗಳಿಗೆ  ತೆರೆದುಕೊಂಡರೂ, ಅಂತಹ ಸನ್ನಿವೇಶಗಳಲ್ಲೂ, ಅಂತಹವರ ಬದುಕಿನಲ್ಲೂ ಕಾಣಬಹುದಾದ ಜೀವನ್ಮುಖಿ ಧೋರಣೆ, ಉತ್ಸಾಹ, ಆಶಾವಾದ ಇವುಗಳನ್ನು  ಬಿಂಬಿಸುತ್ತವೆ.

"ತನ್ಮಯಿಯ ಸೂಟಿ" ಕತೆಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದೂ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅಡಿಗೆ, ಮಗುವಿನ ಪಾಲನೆ ಹೀಗೆ ಒಂದು ರೂಢಿಗತ ಜೀವನ ಶೈಲಿಯನ್ನು ಅನಿವಾರ್ಯವಾಗಿ ಒಪ್ಪಿಕೊಂಡಿರುವ ಕುಶೀಕಾಕಿಯ ಪಾತ್ರವಿದೆ. ಸೂಟಿಗೆ ಮುಂಬಯಿಯಿಂದ ಧಾರವಾಡಕ್ಕೆ ಬರುವ ತನ್ಮಯಿಯ ಕಾರಣದಿಂದ ತನ್ನ ಯೌವನದ ದಿನಗಳ ಉಲ್ಲಾಸವನ್ನು ನೆನಪು ಮಾಡಿಕೊಳ್ಳುವ ಕುಶೀಕಾಕಿ ತನ್ಮಯಿಗೆ ಬೈಸಿಕಲ್ ಕಲಿಸಿಕೊಡಲು ಮುಂದಾಗುವ ಸನ್ನಿವೇಶವಿದೆ. ಇದರ ನಡುವೆ ಸ್ವಲ್ಪ ಬಿಗು ಸ್ವಭಾವದ, ಗಂಡಿನ ದರ್ಪದ ಕಾಕಾನ ಪಾತ್ರ.

ಇನ್ನು "ಸಂತೆಯ ದಿನ" ಕತೆಯ ಪ್ಯಾರೇಲಾಲ, "ಅಮೃತ ಬಳ್ಳಿಯ ಕಷಾಯ"ದ ಮಾಯಿ ಇವರು ತಮ್ಮ ಅಂತಃಕರಣದಿಂದ ಸೆಳೆಯುತ್ತಾರೆ. ಯಾರೋ ಸಂಬಂಧವೇ ಪಡದವರು ಆಸ್ಪತ್ರೆ ಸೇರಿದಾಗ ಅವರ ಶುಶ್ರೂಷೆಗಾಗಿ ಓಡಾಡುತ್ತಾ, ಜೀವನದ ಇನ್ನೊಂದು ಮಾದರಿಯನ್ನು  ತೆರೆದಿಡುತ್ತಾರೆ. ಕೇಕೂ ಶುಕ್ಲಾ ತನ್ನ ಜರಾಕ್ಸ್ ಅಂಗಡಿಯ ಒಂದು ಮೂಲೆಯಲ್ಲಿ ಹಣ್ಣಿನಂಗಡಿ ನಡೆಸುವ ಸ್ನೇಹಿತ ಪ್ಯಾರೆಲಾಲನಿಗೆ ಸ್ವಂತದ ಖೋಲಿ ಮಾಡಿಕೊಳ್ಳುವಂತೆ ನೀಡುವ ಸಲಹೆಗೆ ಪ್ಯಾರೆಲಾಲನ ಉತ್ತರ ಅವನ ಬದುಕಿನ ಫಿಲಾಸಫಿಯನ್ನು ಹೇಗೆ ತೋರಿಸುತ್ತದೆ ನೋಡಿ- "ಈ ಜಗತ್ತೇ ನನ್ನದು ಅನ್ನುವ ಅಲೆಮಾರಿಗೆ ಹತ್ತಾರು ಸ್ಕ್ವೇರು ಫೂಟು ನೆಲವನ್ನು ಮಾತ್ರ ತನ್ನ ಮಾಲಕೀ ಹಕ್ಕು ಅನ್ನುವದು ಹೇಗೆ ಶಕ್ಯವಾದೀತು. ಈ ಜಗತ್ತಿಗೇ ಬಾಡಿಗೆಗೆ ಬಂದ ಜೀವ ಜಗತ್ತಿನ ತುಣುಕೊಂದನ್ನು ಕುತ್ತಿಗೆಗೆ ಕಟ್ಟಿಕೊಂಡು ಕಾಗದ ಪತ್ರ ಮಾಡಿ ಕುಣಿಯುವುದು ಎಂಥ ತಮಾಷೆ. ಛೇ , ಬಾಡಿಗೆ ಮನೆ, ಬಾಡಿಗೆ ವಿಳಾಸಗಳಲ್ಲಿ ಒಂದು ಬಗೆಯ ಹಾಯೆನಿಸುವ ಗುಣ ಇದೆ, ಈ ರೇಡಿಯೋದಂತೆ. ಎಷ್ಟೊಂದು ಹಾಡುಗಳು ಆಕಾಶದಿಂದ ಹಾರಿ ಬಂದು ಇದರ ಬಾಡಿಗೆ ರೆಂಬೆಯಲ್ಲಿ ಕೂತು ಹೋಗುತ್ತವೆ"

"ಈ ಜಗತ್ತೇ ನನ್ನದು" ಎಂಬ ಭಾವನೆ ಈ ಕತೆಗಾರರದ್ದೂ ಇರಬೇಕು. ಆದ್ದರಿಂದಲೇ ಒಂದು  ಸೂಕ್ಷ್ಮ ವಿನೋದದ, ಆಪ್ತವಾದ ದನಿಯಲ್ಲಿ ಎಲ್ಲ ರೀತಿಯ ಜನರ ನಿತ್ಯದ ಗೋಳುಗಳ ಹೋರಾಟದ ಚಿತ್ರಣವನ್ನು ನೀಡಲೂ, ನಾವು ಕಂಡೂ ಕಾಣದಂತೆ ಉಳಿಯುವ  ಇನ್ನೊಂದು ಮಗ್ಗುಲಿನ ಪರಿಚಯ ಮಾಡಿಸಲೂ ಅವರಿಂದ ಸಾಧ್ಯವಾಗುತ್ತದೆ.

ಮನುಷ್ಯರಾಗಿ ಇರುವುದು ಎಂದರೆ ಏನು ಎಂಬ ಪ್ರಶ್ನೆ ಬೇರೆ ಬೇರೆ ಉತ್ತರಗಳನ್ನು ಪಡೆಯುವ ಸಾಧ್ಯತೆಯಿರುತ್ತದೆ. ಕೆಲವೇ  ಪುಟಗಳ ಕತೆಯಲ್ಲಿ ಜಯಂತ ಕಾಯ್ಕಿಣಿಯವರು ಒಂದು ಪುಟ್ಟ ಲೋಕವನ್ನೇ ಅಥವಾ ಲೋಕದ ಒಂದು ಪುಟ್ಟ ಚಿತ್ರವನ್ನೇ ತೆರೆದಿಡುತ್ತಾ ಅದರಲ್ಲಿ ಪಾತ್ರಗಳ ಭಾವನೆಗಳ, ಪ್ರೇರಣೆಗಳ, ಕಾತರಗಳ ಪರಿಚಯ ಮಾಡಿಸುವ ರೀತಿ ಇಷ್ಟವಾಗುತ್ತದೆ. ಜಯಂತರ ಪ್ಯಾರೆಲಾಲನಂತೆಯೇ ಈ ಹಿಂದೆ ಲಂಕೇಶರ ನೀಲು ಸಹ ಕೋಟ್ಯಂತರ ಜನರ ಆಳದ ಅಪೇಕ್ಷೆಗಳ ಬಗ್ಗೆ ಹೇಳಿದ್ದು ನೆನಪಿಗೆ ಬರುತ್ತಿದೆ-

ಸುಖಕ್ಕಾಗಿ ಕಾತರಿಸುವ ಕೋಟ್ಯಂತರ ಜನಕ್ಕೆ
ಹಣ ಬೇಕು, ನೆಲ ಬೇಕು
ಕೆಲವರಿಗೆ ಪ್ರೀತಿ
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.
-ನೀಲು

Saturday, June 14, 2014

ಮುದ ನೀಡುವ 'ಒಗ್ಗರಣೆ'

ಕಳೆದೊಂದು ವಾರದಿಂದ ಕನ್ನಡದ ಮಾಧ್ಯಮ ಲೋಕದಲ್ಲಿ ಚಟಪಟ ಸದ್ದು ಮಾಡುತ್ತಿರುವ ಪ್ರಕಾಶ್ ರೈಯವರ ಕನ್ನಡ ಸಿನಿಮಾ 'ಒಗ್ಗರಣೆ' ಮಾಮೂಲಿ ಸೂತ್ರಕ್ಕೆ ಕಟ್ಟು ಬೀಳದೆ ಕಣ್ಣು ಕಿವಿ ಮನಸು (ಮೂಗೂ?) ಎಲ್ಲವನ್ನೂ ಹಿತಮಿತವಾಗಿ ಆಹ್ಲಾದಗೊಳಿಸುವ ಚಿತ್ರ. ಇಂತಹ ಚಿತ್ರಗಳೂ ಬರುತ್ತಿರುವುದು ತುಂಬಾ ಒಳ್ಳೆಯ ಸೂಚನೆ. ಹಿಂದೆ ಪ್ರಕಾಶ್ ರೈ ನಿರ್ದೇಶಿಸಿ ನಟಿಸಿದ್ದ 'ನಾನೂ ನನ್ನ ಕನಸು' ಚಿತ್ರವನ್ನು ನೋಡಿ, ಅದರಲ್ಲಿನ ಕೌಟುಂಬಿಕ ಸಂಬಂಧಗಳ ನವಿರಾದ ನಿರೂಪಣೆಯನ್ನು ಮೆಚ್ಚಿಕೊಂಡಿದ್ದರಿಂದಲೇ ನಾನು  'ಒಗ್ಗರಣೆ' ಚಿತ್ರವನ್ನು ಅದು ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ನೋಡಲು ನಿರ್ಧರಿಸಿದ್ದು.

ಸ್ವಾದವನ್ನು ಹೆಚ್ಚಿಸಲು ಸಾರಿಗೊಂದು ಒಗ್ಗರಣೆ ಇರುವಂತೆ ಜೀವನದಲ್ಲಿ ಪ್ರೀತಿ ಸಹ ಅನಿವಾರ್ಯವಲ್ಲದಿದ್ದರೂ ಅಪೇಕ್ಷಿತ ಅನ್ನುವುದನ್ನು ಬಿಂಬಿಸುವುದು  ಸ್ವಲ್ಪ ವಿಚಿತ್ರವೆನಿಸುವ ಶೀರ್ಷಿಕೆಯ ಉದ್ದೇಶ ಇರಬಹುದು. ಅದೇನೇ ಇರಲಿ, ಈ ಚಿತ್ರದ ಬಗೆಗೆ ಬರೆಯುತ್ತಿರುವ ಬಹುಪಾಲು ಎಲ್ಲರೂ ಕತೆಯೊಂದಿಗೆ ತಳಕುಗೊಂಡಿರುವ ಅಡಿಗೆಯ ಎಳೆಯನ್ನುವಿಶೇಷವಾಗಿ ಪ್ರಸ್ತಾಪ ಮಾಡುತ್ತಾ ಇರುವುದರಿಂದ ಮತ್ತೆ ಅದೇ ಸಂಕೇತದ ಸುತ್ತು ಬರದೆ ಚಿತ್ರದ ಬಗ್ಗೆ ಮತ್ತೆ ಒಂದಿಷ್ಟು ನೋಟ ಹರಿಸಬಹುದೇನೋ.

ಚಿತ್ರದ ನಾಯಕ ಕಾರಣಾಂತರದಿಂದ ಮಧ್ಯ ವಯಸ್ಸಿನವರೆಗೂ ಮದುವೆಯಾಗದೇ ಉಳಿದ ಪುರಾತತ್ತ್ವ ಇಲಾಖೆಯ ಅಧಿಕಾರಿ . ನಾಯಕಿ ಕಂಠದಾನ ಕಲಾವಿದೆಯಾಗಿ ಕೆಲಸ ಮಾಡುತ್ತಾ ಮದುವೆಯ ವಯಸ್ಸು ದಾಟಿದ್ದರೂ ಮದುವೆಯಾಗದೇ ಉಳಿದಿರುವವಳು . ಬೇರೆ ಯಾರಿಗೋ ದೂರವಾಣಿ ಕರೆ ಮಾಡಹೊರಡುವ ನಾಯಕಿಯ ಕರೆ ನಾಯಕನಿಗೆ ಹೋಗಿ, ಇದರಿಂದ ಮೊದಲು ಸ್ವಲ್ಪ ಜಗಳ, ನಂತರ ಸ್ವಲ್ಪ ಸ್ನೇಹ, ಮುಂದೆ ಒಂದು ರೀತಿಯ  ಆಕರ್ಷಣೆ ಹೀಗೆ ಸಾಗುವ ಕತೆ. ತುಂಬಾ ಸರಳವೆನ್ನಬಹುದಾದ ಕತೆ  ಇದಾದರೂ, ಪ್ರತಿಭಾವಂತ ನಟ-ನಿರ್ದೇಶಕ ಪ್ರಕಾಶ್ ರೈಯವರ ಕೈಯಲ್ಲಿ  ನೈಜವಾದ, ನಂಬಬಹುದಾದ, ತಮಾಶೆಯಾದ ಚಿತ್ರವಾಗಿ ಮೂಡಿಬಂದಿದೆ.   ದೂರವಾಣಿಯಲ್ಲಿ ಆರಂಭವಾಗುವ ನಾಯಕ-ನಾಯಕಿಯರ ಗೆಳೆತನ  ಮುಂದುವರೆದಂತೆ ಇಬ್ಬರೂ ಭೇಟಿಯಾಗುವ ಯೋಚನೆ ಮಾಡುತ್ತಾರಾದರೂ ತಮ್ಮ ಏರುತ್ತಿರುವ ವಯಸ್ಸಿನ ಕಾರಣಕ್ಕೋ  ಏನೋ ಹಿಂಜರಿಕೆಯಾಗಿ ಇಬ್ಬರೂ ತಾವು ಹೋಗದೇ, ತಮ್ಮ ಹೆಸರಿನಲ್ಲಿ  ತಮ್ಮ ಕಿರಿಯ ಸಂಬಂಧಿಗಳನ್ನು ಮುಖಾಮುಖಿ ಭೇಟಿಗೆ ಕಳಿಸುತ್ತಾರೆ. ಇದು ಮೊದಲಿಗೆ ತಮಾಶೆಯ ಸನ್ನಿವೇಶ ಹುಟ್ಟು ಹಾಕಿದರೂ ಮುಂದೆ ಎರಡೂ ಜೋಡಿಗಳಿಗೂ  ಇರುಸು ಮುರುಸು ಉಂಟು ಮಾಡುವಲ್ಲಿಗೆ ತಲುಪುತ್ತದೆ.  ವಯಸ್ಕ ಜೋಡಿಯಾಗಿ ಪ್ರಕಾಶ್ ರೈ -ಸ್ನೇಹಾ , ಯುವ ಜೋಡಿಯಾಗಿ ತೇಜಸ್-ಸಂಯುಕ್ತಾ ತಮ್ಮ ತಮ್ಮ ಪಾತ್ರಗಳಿಗೆ ಪೂರ್ಣ ನ್ಯಾಯ ಒದಗಿಸಿದ್ದಾರೆ. 

ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದ ಬಸು ಚಟರ್ಜಿ, ಹೃಷಿಕೇಶ್ ಮುಖರ್ಜಿ ಇವರು ನಿರ್ದೇಶಿಸುತ್ತಿದ್ದ ಲಘು ಹಾಸ್ಯದ ಮಧ್ಯಮ ವರ್ಗದ ಕತೆಗಳಾಗಿರುತ್ತಿದ್ದ ರೋಮಾಂಟಿಕ್ ಕಾಮೆಡಿ ಚಿತ್ರಗಳನ್ನು ಹೋಲುವ ಚಿತ್ರವಿದು. ಆ ಕಾಲ ಘಟ್ಟದ ಹಲವಾರು ಚಿತ್ರಗಳಲ್ಲಿ  ಅಮೋಲ್ ಪಾಲೇಕರ ಅಭಿನಯಿಸುತ್ತಿದ್ದರು.  'ಒಗ್ಗರಣೆ' ನೋಡುವಾಗ ಸಹ ಅಂದಿನ  ಚಿತ್ರಗಳಲ್ಲಿರುತ್ತಿದ್ದ ಲವಲವಿಕೆ, ಜೀವನೋತ್ಸಾಹ, ಸಂಭ್ರಮದ ಅನುಭವ ಆಗುತ್ತದೆ. ನವಿರು ಭಾವನೆಗಳ ಮೃದು ಸ್ನೇಹ ಸಂಬಂಧಗಳ ಅಭಿವ್ಯಕ್ತಿಗೆ ಬೇಕಾದ ಸೂಕ್ಷ್ಮತೆ, ಲಘು ಸ್ಪರ್ಶಗಳನ್ನು ಕನ್ನಡದ  ಚಿತ್ರ ನಿರ್ದೇಶಕರು ತೋರುವುದು ಸಂತಸದ ಹೆಮ್ಮೆಯ ವಿಷಯ. 


ಒಂಟಿಗಳಾಗಿದ್ದೂ ತಮ್ಮ ತಮ್ಮ ದೈನಂದಿನ  ಜೀವನದಲ್ಲಿ ನೆಮ್ಮದಿಯಾಗಿಯೇ ಇದ್ದವರು ಅಚಾನಕ್ಕಾಗಿ ಒಂದು ರಾಂಗ್ ನಂಬರ್ ಕರೆಯ ಕಾರಣದಿಂದ ಪರಿಚಿತರಾಗಿ, ಪರಸ್ಪರರ  ದನಿಗೆ ಮಾತಿಗೆ ಕಾಯುವಷ್ಟು ಆಪ್ತರಾಗುವುದು, ಹೊಸ ಉಲ್ಲಾಸ ಪಡೆಯುವುದು ಎಲ್ಲವೂ ಸಹಜವಾಗಿ ಸುಂದರವಾಗಿ ಮೂಡಿ ಬರುತ್ತದೆ. 


'ಛೊಟೀ ಸಿ ಬಾತ್' ಚಿತ್ರದ ಒಂದು ಹಾಡಿನ ಈ ಸಾಲುಗಳನ್ನು ನೋಡಿ-


ನ ಜಾನೆ ಕ್ಯು, ಹೋತಾ ಹೈ ಎ ಝಿಂದಗಿ ಕೆ ಸಾಥ್  

ಅಚಾನಕ್ ಎ ಮನ್ ಕಿಸಿ ಕೆ ಜಾನೆ ಕೆ ಬಾದ್ 
ಕರೆ ಫಿರ್ ಉಸ್ಕಿ ಯಾದ್, ಛೊಟೀ ಛೊಟೀ ಸಿ ಬಾತ್ 
ನ ಜಾನೆ ಕ್ಯು 

ನನಗನ್ನಿಸಿದ್ದು ಎಲ್ಲಕ್ಕಿಂತ ಮುಖ್ಯವಾಗಿ 'ಒಗ್ಗರಣೆ' ಪ್ರತಿಬಿಂಬಿಸುವುದು ಇದನ್ನೇ.  ನಮ್ಮ ಮನಸ್ಸುಗಳ ಸಖ್ಯ, ಸಾಂಗತ್ಯಗಳ ಹಂಬಲ  ತುಡಿತಗಳನ್ನೇ.  ಛೊಟೀ ಛೊಟೀ ಬಾತ್ ಗಳನ್ನು  ನೆನೆಯುವ, ನೆನೆದು ಖುಷಿ ಪಡುವ, ಒಂದು ಮೆಚ್ಚುಗೆ ಒಂದು ಆತ್ಮೀಯ ನುಡಿಗೂ ಅರಳುವ ಎಲ್ಲರ ಆಳದ ಮನೋಸ್ಥಿತಿಯನ್ನೇ . 

ಹೊರರಾಜ್ಯದ ಕಲಾವಿದೆ ಸ್ನೇಹ ಅವರ ಅಭಿನಯ ಗಮನ ಸೆಳೆಯುತ್ತದೆ. ಮಧ್ಯ ವಯಸ್ಸಿನಲ್ಲಿ ಆಕಸ್ಮಿಕವಾಗಿ ಬಂದೊದಗುವ ಪ್ರೀತಿಯನ್ನು  ಸ್ವೀಕರಿಸುವುದಕ್ಕೆ ಮತ್ತು  ಮರಳಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಆಕೆಯ ಪಾತ್ರ ಅನುಭವಿಸುವ ಹಿಂಜರಿಕೆ, ಮುಜುಗರಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ.  ಹಾಗೆಯೇ ಪ್ರಕಾಶ್ ರೈ ಅಭಿನಯ. ಸಂಪೂರ್ಣ ಆತ್ಮ ವಿಶ್ವಾಸದ, ಧೈರ್ಯಶಾಲಿ ವ್ಯಕ್ತಿತ್ವದ ಮನುಷ್ಯನಾಗಿದ್ದರೂ ಪ್ರೀತಿ ನಿವೇದನೆಯ ವಿಷಯದಲ್ಲಿ ಮನಸ್ಸಿನಲ್ಲಿದ್ದದ್ದನ್ನು ಹೇಳಲಾರದೆ ತೊಳಲಾಡುವ ವಯಸ್ಕ ಪ್ರೇಮಿಯ ಪಾತ್ರ ನೆನಪಿನಲ್ಲುಳಿಯುತ್ತದೆ.

ಕಲಾತ್ಮಕ ಚಿತ್ರಗಳನ್ನುಳಿದಂತೆ ಉಳಿದ ಬಹುಪಾಲು ಎಲ್ಲ ಸಿನಿಮಾಗಳಲ್ಲೂ  ಸುಂದರ ಆಕಸ್ಮಿಕಗಳು, ಅಸಾಧ್ಯ ತಿರುವುಗಳು ಸಾಮಾನ್ಯವೇ ಆದರೂ 'ಒಗ್ಗರಣೆ'ಯಂತಹ ಚಿತ್ರಗಳಲ್ಲಿ  ಸನ್ನಿವೇಶಗಳು ಪ್ರಯತ್ನಪೂರ್ವಕವಾಗಿ ನಿರ್ಮಾಣವಾದಂತೆ ತೋರಬರದೇ ಕತೆಗೆ , ಪಾತ್ರಕ್ಕೆ ಪೂರಕವಾಗಿ ಒದಗಿ ಬರುತ್ತವೆ.  ಸಂಭಾಷಣೆ, ಹಾಸ್ಯ, ಹಿನ್ನೆಲೆ ಸಂಗೀತ, ಹಾಡುಗಳು, ಛಾಯಾಗ್ರಹಣ ಹೀಗೆ ಎಲ್ಲ ವಿಭಾಗಗಳಲ್ಲೂ ಒಂದು ಪಕ್ವತೆ ಇದೆ.  ಕನ್ನಡದ ಹತ್ತು ಹಲವು ಚಿತ್ರಗಳಲ್ಲಿ  ಮುಖ್ಯ ಸಮಸ್ಯೆ ಅನಿಸುವ ಅಬ್ಬರ, ಅತಿರಂಜನೆ, ಅತಿರೇಕಗಳು  ಈ ಚಿತ್ರದಲ್ಲಿ ಇಲ್ಲ.  

ನಾನು ನೋಡಿರುವ, ಮೆಚ್ಚಿರುವ ಇತರ ಕನ್ನಡ ಚಲನಚಿತ್ರಗಳನ್ನು ನೆನೆದು ಪಟ್ಟಿ ಮಾಡಿದ್ದೇನೆ.  'ಒಗ್ಗರಣೆ' ಯಂತಹ ಸದಭಿರುಚಿಯ ಕನ್ನಡ ಚಿತ್ರಗಳು ಹೆಚ್ಚು ಹೆಚ್ಚು ಬರಲಿ. 

ನನ್ನ ಮೆಚ್ಚಿನ ಕನ್ನಡ ಚಲನ ಚಿತ್ರಗಳು