Sunday, May 18, 2014

ಕರ್ಮ: ಕನ್ನಡದಲ್ಲೊಂದು ಹೊಸ ಕಾದಂಬರಿ



ಮೊನ್ನೆ ಆಫೀಸಿನಲ್ಲಿ ಗೆಳೆಯರೊಬ್ಬರು ಇತ್ತೀಚೆಗೆ ಪ್ರಕಟವಾಗಿರುವ ಕನ್ನಡದ ಕಾದಂಬರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಕರಣಂ ಪವನ್ ಪ್ರಸಾದ್ ಎಂಬುವವರು ಬರೆದಿರುವ 'ಕರ್ಮ' ಎಂಬ ಹೆಸರಿನ ಕಾದಂಬರಿ. ಹಾಗೇ ಕಣ್ಣಾಡಿಸಿದಾಗ ಬರವಣಿಗೆಯ ಶೈಲಿ ಸ್ವಾರಸ್ಯಕರ ಎನಿಸಿತು. ಆರಂಭಿಸಿದ ಮೇಲೆ ಪುಸ್ತಕ ಕುತೂಹಲದಿಂದ ಓದಿಸಿಕೊಂಡುಹೋಯಿತು.

ಪುಸ್ತಕದ ಹೆಸರು ಮತ್ತು ಮುಖಪುಟ ಅನಂತಮೂರ್ತಿಯವರ ಬಹುಮುಖ್ಯ ಕಾದಂಬರಿ 'ಸಂಸ್ಕಾರ'ವನ್ನು ನೆನಪಿಗೆ ತರುತ್ತವೆ. ಪುಸ್ತಕದ ಪ್ರಥಮ ಪ್ರತಿಯನ್ನು ಎಸ್. ಎಲ್. ಭೈರಪ್ಪನವರು ಓದಿ ಮೆಚ್ಚಿರುವ ವಿಷಯವನ್ನು ಲೇಖಕರು ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತಾರೆಮುನ್ನುಡಿಯಲ್ಲಿ ಲೇಖಕರು ಕಥೆಯ ಸಂಕ್ಷಿಪ್ತ ಪರಿಚಯವನ್ನು ಹೀಗೆ ಕಾಣಿಸುತ್ತಾರೆ: ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನವೇ 'ಕರ್ಮ'.

'ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸ್ಸಾಯಿತು' ಎಂದೂ ಲೇಖಕರು ಮುನ್ನುಡಿಯಲ್ಲಿ ಬರೆಯುತ್ತಾರೆ. ಇದೆಲ್ಲವೂ ಆರಂಭದಲ್ಲಿಯೇ ಕೃತಿಯಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದವು.

ಕಾದಂಬರಿ ಪ್ರಕಾರ ನನ್ನ ಮೆಚ್ಚಿನ ಸಾಹಿತ್ಯ ಪ್ರಕಾರ. ಯಾವುದೇ ಉತ್ತಮ ಕಾದಂಬರಿ ಓದುವಾಗಲೂ ಇನ್ನೊಂದೇ ಪ್ರಪಂಚದ ಪ್ರವೇಶ ಮಾಡುವ ಅನುಭವ ಆಗುತ್ತದೆ. ಇಂತಹದೊಂದು ಪ್ರಪಂಚದಲ್ಲಿ ಪ್ರತಿಭಾವಂತ ಲೇಖಕ ಅಥವಾ ಲೇಖಕಿ ಜೀವನದಲ್ಲಿ ಹೊರನೋಟಕ್ಕೆ ಕಾಣುವ ಸತ್ಯಕ್ಕೂ ಹಾಗೂ ನಿಜಕ್ಕೂ ಇರುವ ದ್ವಂದ್ವಗಳನ್ನು ಶೋಧಿಸುವುದು ಸಾಧ್ಯವಿರುತ್ತದೆ.  'ಕರ್ಮ'ದ ಕೇಂದ್ರ ಪಾತ್ರವಾಗಿರುವವರು ನಗರದವರಾದ್ದರಿಂದ ಆರಂಭದಿಂದಲೇ ಬಹಳಷ್ಟು ವಿವರಗಳು ಪರಿಚಿತವಾದ ಸಂಗತಿಗಳೆನಿಸುತ್ತವೆ. ಏಕರೂಪಿ ನಾಗರಿಕತೆಯು ಸಾಂಸ್ಕೃತಿಕ ವಿಶಿಷ್ಟತೆಗಳನ್ನೆಲ್ಲ ಬುಡಮೇಲು ಮಾಡುತ್ತಾ ತಂದು ಹೇರುತ್ತಿರುವ ಒಂದು ನಿರ್ದಿಷ್ಟ ಜೀವನಕ್ರಮ ನಗರದ  ಬಹುಪಾಲು ಜನರ ಜೀವನ ಕ್ರಮ ಆಗಿರುವುದರಿಂದ ವಿವರಗಳು  ಬಹುಶಃ ಬಹಳ ಮಂದಿ ಓದುಗರಿಗೆ ಅರಿವಿರುವ ಸಂಗತಿಗಳಾಗುತ್ತವೆ. ಸುರೇಂದ್ರ ಹಾಗೂ ಆತನ ಅಂತರ್ಜಾತೀಯ ವಧು ನೇಹಾ ಇವರ ದೈನಿಕ ಜೀವನದ ವಿವರಗಳು ಸಹ ಸಹಜವಾಗಿ ಮೂಡಿಬರುತ್ತವೆ. ಎಸ್. ಎಲ್. ಭೈರಪ್ಪನವರಂತಹ ನುರಿತ ಲೇಖಕರಿಂದ "ನಿಮ್ಮ ಕಾದಂಬರಿಯಲ್ಲಿ ಬೆಂಗಳೂರು ವಲಯದ ಮುಂದುವರೆದ ಜೀವನ ಪಧ್ಧತಿ ನೈಜವಾಗಿ ಮೂಡಿಬಂದಿದೆ. ನಿಮ್ಮ ಗ್ರಹಿಕೆಯಿಂದ ಕಥನ ಉತ್ಪ್ರೇಕ್ಷೆಯಿಂದ ಹೊರತಾಗಿದೆ" ಎಂದು ಹೊಗಳಿಸಿಕೊಂಡ ಹೆಗ್ಗಳಿಕೆಯೂ ಲೇಖಕರಿಗಿದೆ.

ಇಂತಹ ನಗರಸಮಾಜದ ಜೀವನಕ್ರಮದವರು ತಾವು ಹಿಂದೆ ಬಿಟ್ಟು ಬಂದಿರುವ ತಮ್ಮ ಮೂಲದ ದೇಸೀ ಸಂಸ್ಕೃತಿಯೊಡನೆ ಮತ್ತೆ ಮುಖಾಮುಖಿಯಾಗುವಾಗ ಉಂಟಾಗುವ ತಾಕಲಾಟವೆ ಕಾದಂಬರಿಯ ಕೇಂದ್ರ ವಸ್ತು. ತನ್ನ ತಂದೆಯ ಸಾವಿನ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಹಿಂದಿರುಗುವ ಸುರೇಂದ್ರ ಅನುಭವಿಸುವ ಪರಕೀಯತೆ, ಗೊಂದಲ, ತೊಳಲಾಟ, ಸ್ಥಿತ್ಯಂತರ ಇವೆಲ್ಲವುಗಳ ವಿವರ ಸಾವಿನ ನಂತರದ ಶ್ರಾಧ್ಧ ಕಾರ್ಯಗಳ ವಿವರಗಳ ಹಿನ್ನೆಲೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿವೆ.

'ಕರ್ಮ'ವನ್ನು ಓದುವಾಗ ನನಗೆ ಈ ಹಿಂದೆ ಓದಿದ್ದ ಎರಡು ಪ್ರಮುಖ ಕಾದಂಬರಿಗಳು ನೆನಪಿಗೆ ಬಂದವು. ಒಂದು, ಯು. ಆರ್. ಅನಂತಮೂರ್ತಿಯವರು ಬರೆದ 'ಸಂಸ್ಕಾರ'. ಇನ್ನೊಂದು, ಎಸ್. ಎಲ್. ಭೈರಪ್ಪನವರು ಬರೆದ 'ತಬ್ಬಲಿಯು ನೀನಾದೆ ಮಗನೆ'. ಕಥಾ ವಸ್ತುವಿನಲ್ಲಿ ಒಂದು ಬಗೆಯ ಸಾಮ್ಯತೆ ಇರುವುದರಿಂದ ಈ ಎರಡು ಕಾದಂಬರಿಗಳ ಹಿನ್ನೆಲೆಯೊಂದಿಗೆ  'ಕರ್ಮ' ಕಾದಂಬರಿಯ  ಮೂಲದ್ರವ್ಯದ ಪರಿಗಣನೆ ಮಾಡುವುದು ಸಹಕಾರಿಯಾಗಬಹುದು.

'ಸಂಸ್ಕಾರ' ಕಾದಂಬರಿಯನ್ನು ಓದಿ ಬಹಳ ವರ್ಷಗಳೇ ಆಗಿದ್ದರೂ (ಗಿರೀಶ್ ಕಾರ್ನಾಡ ಅದ್ಭುತವಾಗಿ ಅಭಿನಯಿಸಿರುವ ಇದೇ ಕಾದಂಬರಿಯ ಆಧಾರಿತ ಚಲನ ಚಿತ್ರವನ್ನು ಇತ್ತೀಚೆಗೆ ನೋಡಿದೆ) ನನಗೆ ಇಂದಿಗೂ ನೆನಪಿರುವುದೆಂದರೆ ಕಾದಂಬರಿಯ ಕೇಂದ್ರ ಪಾತ್ರಧಾರಿ ಪ್ರಾಣೇಶಾಚಾರ್ಯರು ಧರ್ಮ ಸೂಕ್ಷ್ಮಗಳಿಂದಾಗಿ ವೈಯಕ್ತಿಕ ಜೀವನದಲ್ಲಿ ಅನುಭವಿಸಬೇಕಾಗಿ ಬರುವ ತಲ್ಲಣದ ಚಿತ್ರಣಇಲ್ಲಿ ಪ್ರಾಣೇಶಾಚಾರ್ಯರಿಗೆ ತಾವು ನಂಬುವ ಧರ್ಮಕ್ಕೂ ಮತ್ತು ತಮಗೂ ಇರುವ ಸಂಬಂಧವು  ಸಮಾಜದ ನಿರೀಕ್ಷೆಗಳಿಗನುಗುಣವಾಗಿ ನಿರ್ಧಾರವಾಗುವುದು. ಹಾಗೆಯೇ ವ್ಯಕ್ತಿ ಸ್ವಾತಂತ್ರ್ಯದ ಪರಿವೆಯೇ ಇಲ್ಲದ ಇತರರು ಅವರಲ್ಲಿ ಸೃಷ್ಟಿಸುವ ಅಸಹಾಯಕತೆಯ ಚಿತ್ರಣವೂ  ಧರ್ಮದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತದೆ.

ಇನ್ನು ಎಸ್. ಎಲ್. ಭೈರಪ್ಪನವರ 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯಲ್ಲಿ ವಿದೇಶಿ ಮಹಿಳೆ ಹಿಲ್ಡ ಮತ್ತು ದೇವಾಲಯದ ಅರ್ಚಕ ವೆಂಕಟರಮಣ ಇವರಲ್ಲಿ ಗೋವಿನ ಬಗೆಗೆ ಪರಸ್ಪರರಲ್ಲಿರುವ ವಿರುದ್ಧದ ದೃಷ್ಟಿಕೋನದ ಕಾರಣದಿಂದ ವಾಗ್ಯುದ್ಧವೇ  ನಡೆಯುತ್ತದೆ. ಆಗ ವೆಂಕಟರಮಣ ಪಾಶ್ಚಾತ್ಯ ಜೀವನಕ್ರಮ, ನಂಬಿಕೆ, ಶ್ರದ್ಧೆ, ಜೀವನಧ್ಯೇಯ ಇವೆಲ್ಲದರ ಪ್ರಶ್ನೆ ಮಾಡುತ್ತಾನೆ. ಕಾದಂಬರಿಯ ಅಂತ್ಯದಲ್ಲಿ ಶ್ರಧ್ಧೆ, ನಂಬಿಕೆಗಳ ಮಹತ್ವವನ್ನು ಎತ್ತಿ ಹಿಡಿಯುವಂತೆ ಹಿಂದೆ ಗೋಹತ್ಯೆಗೆ ಮುಂದಾಗಿದ್ದ ಹಿಲ್ಡಳಿಗೆ ಆವಳ ತಪ್ಪಿಗೆ ಶಿಕ್ಷೆಯೇನೋ  ಎಂಬಂತೆ ಆಕೆಯ ಪುಟ್ಟ ಮಗುವಿಗೆ ಹಸುವಿನ ಕೆಚ್ಚಲಿನ ಹಾಲೇ ಬೇಕಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ.

'ಸಂಸ್ಕಾರ' ಕಾದಂಬರಿಯು ರೂಢಿಗತ ಪಧ್ಧತಿಯ ಕಠೋರತೆ, ಧರ್ಮದ ಹೆಸರಿನಲ್ಲಿ ನಡೆಯುವ ಗೋಸುಂಬೆತನದ ವರ್ತನೆಗಳು ಇತ್ಯಾದಿಗಳ ಪ್ರಶ್ನೆ ಮಾಡುತ್ತಾ ಹೊಸದೊಂದು ಪ್ರಜ್ಞೆಯ ಸಾಧ್ಯತೆಯತ್ತ ಬೆರಳು ಮಾಡಿದರೆ, 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯು ಪೂರ್ವ-ಪಶ್ಚಿಮಗಳ ವಿಭಿನ್ನ ಜೀವನ ಕ್ರಮ, ನಂಬಿಕೆಗಳ ಮುಖಾಮುಖಿಯನ್ನು ತುಂಬಾ ಸ್ವಾರಸ್ಯವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾದರೂ ಭಿನ್ನವಾದೊಂದು ಚಿಂತನೆಯ ಸಾಧ್ಯತೆಯನ್ನೇ ಅಸಾಧುವೆನ್ನುವಂತೆ ಭಾರತೀಯ ಶ್ರದ್ಧೆಯ ಶ್ರೇಷ್ಟತೆಯನ್ನು  ಪ್ರಶ್ನಾತೀತಗೊಳಿಸುವ ಪ್ರಯತ್ನ ಮಾಡುತ್ತದೆ.

'ಕರ್ಮ' ಸಹ ಭೈರಪ್ಪನವರ ಮಾರ್ಗದಲ್ಲಿ ಸಾಗುತ್ತದೆ. ಸಮಾಜದ ಆಧುನಿಕ ಕಾಲಘಟ್ಟದಲ್ಲಿ ರೂಢಿಗತ ಆಚರಣೆಗಳ, ನಂಬಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ, ಹೊಸತು-ಹಳತರ ಘರ್ಷಣೆಯ ಸಾಧ್ಯತೆಯನ್ನು ತೋರುತ್ತಲೇ ಕಾದಂಬರಿಯು ಕಡೆಯಲ್ಲಿ "ನಂಬಿಕೆ ಚಂಚಲ, ಶ್ರದ್ಧೆ ಅಚಲ" ಎಂಬ ಯಥಾಸ್ಥಿತಿ ವಾದಕ್ಕೆ ಶರಣಾಗುತ್ತದೆ. ಕಾದಂಬರಿಯ ಉದ್ದಕ್ಕೂ ಒಬ್ಬ ದುರ್ಬಲ ವ್ಯಕ್ತಿತ್ವದ, ಕೇವಲ ಹಣಗಳಿಕೆಯಷ್ಟೇ ಗುರಿಯಾಗಿರುವ, ಸಂಪ್ರದಾಯ ವಿರೋಧಿಯಾದ ವ್ಯಕ್ತಿಯಾಗಿ ವರ್ಣಿಸಲ್ಪಡುವ ಸುರೇಂದ್ರನನ್ನು ಕಾದಂಬರಿಯ ಕಡೆಯಲ್ಲಿ ಬರುವ ಒಂದು ವಿಚಿತ್ರ ತಿರುವಿನ ಮೂಲಕ ಒಬ್ಬ ಅಬ್ರಾಹ್ಮಣ ತಂದೆಯ ಪಾಪದ ಸಂತಾನವೆಂದು ಸಿಧ್ಧಪಡಿಸುವುದಂತೂ ತೀರಾ ಅನಿರೀಕ್ಷಿತ. ಆಧುನಿಕ ನಗರವಾಸಿ ಯುವಜನರು ಮತ್ತವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪಲ್ಲಟಗಳನ್ನು ದಟ್ಟ ವಿವರಗಳ ಮೂಲಕ ಆಕರ್ಷಕವಾಗಿ, ಕುತೂಹಲಕರವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗುವ ಕೃತಿಯು ಕಡೆಯಲ್ಲಿ ಪ್ರಸ್ತುತ ಕಾಲಘಟ್ಟದ ವೈದೃಶ್ಯಗಳ ಮುಖಾಮುಖಿಯ ಪ್ರಶ್ನೆಯನ್ನು ವೈಚಾರಿಕವಾಗಿ ಎದುರಿಸದೆ ಜಾತಿ, ಸಂಸ್ಕಾರ ಎಂಬ ಅವೇ ಹಳೇ ಸವಕಲು ವಿವರಣೆಗಳ ಮೊರೆ ಹೋಗಿರುವುದು ನಿರಾಸೆ ಮೂಡಿಸಿತು.

ಈಚೆಗೆ ಓದಿದ ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ 'ಮಾನವೀಯತೆ ಅಂತಾರಲ್ಲ - ಅದರ ಬಗ್ಯೆ' ಎಂಬ ಲೇಖನದಲ್ಲಿ ಓದಿದ ಸಾಲು ನೆನಪಾಗುತ್ತಿದೆ- "...ಜನ್ಮ, ಕರ್ಮ, ವರ್ಣ, ಜಾತಿಕಟ್ಟುಪಾಡು, ಸತ್ಯಕ್ಕೆ ಬಂದರೂ ಅದರೊಳಗೂ ಪಾರಮಾರ್ಥಿಕ ಸತ್ಯ, ಲೌಕಿಕ ಸತ್ಯ ಎಂದು ಸತ್ಯವನ್ನೂ ಇಬ್ಬಂದಿ ಮಾಡಿ ಒಡಲು ಪಡೆದ ಕೃತಿಗಳೇ ಇಲ್ಲಿ ಹೆಚ್ಚಾಗಿ ಸಮಾಜದ ಛಿದ್ರತೆಗೆ ಇವುಗಳ ಕಾಣಿಕೆಯೂ ಇದೆ."

'ಕರ್ಮ' ಕಾದಂಬರಿ ಇದಕ್ಕೆ ಹೊರತಾಗಬಹುದಿತ್ತು. ಅದರಲ್ಲೂ 'ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ' ಎಂಬ ಟೀಕೆಗೆ ಉತ್ತರ ರೂಪದಲ್ಲಿ ಕಾದಂಬರಿಯ ರಚನೆಗೆ ತೊಡಗಿದ ಈ ಪ್ರತಿಭಾವಂತ ಬರಹಗಾರ ಶ್ರಧ್ಧೆ, ಸಂಸ್ಕೃತಿಗಳ ವಿಚಾರವನ್ನು ಕಾದಂಬರಿಯ ಬಂಧದಲ್ಲೇ ಇನ್ನಷ್ಟು ವಿಚಾರಕ್ಕೆ ಹಚ್ಚಬಹುದಿತ್ತೇನೋ. "ಶ್ರದ್ಧಾ ಭಂಗವಾದರೆ ಸಂಸ್ಕೃತಿ ಉಳಿಯಲ್ಲ" ಎಂಬ ವೆಂಕಟೇಶ ಭಟ್ಟರ ಮಾತು ಮತ್ತು ಅದಕ್ಕೆ ಉತ್ತರವಾಗಿ "ಆಯಿತು, ಸಂಸ್ಕೃತಿ ಎಂದರೆ ಏನು ಎಂಬುದರ ಅಧ್ಯಯನ ಆಗಬೇಕು" ಎಂಬ ಅವರ ಮೊಮ್ಮಗ ಪುರುಷೋತ್ತಮನ ಮಾತು (ಪು. ೧೦೬-೧೦೭) ಇಂತಹದೊಂದು ಪ್ರಶ್ನೆಯ ವಿಶ್ಲೇಷಣೆಯ ಸುಳಿವು ಕಾಣಿಸುತ್ತದೆ. "ವೈದಿಕದ ಜತೆಗೇ ಜಾತ್ಯತೀತತೆ, ಸಮಾನತೆ, ಪ್ರಗತಿಪರತೆಗಳೂ ಶ್ರದ್ಧೆಯ ಭಾಗಗಳಾಗಬೇಕೆಂದು" ಪುರುಷೋತ್ತಮ ಹೇಳಬಹುದಿತ್ತೇನೋ. ಆತ ಹಾಗೇನಾದರೂ ಹೇಳಿದ್ದಲ್ಲಿ 'ಕರ್ಮ'ದಲ್ಲಿ 'ಸಂಸ್ಕೃತಿ' ಯ ವ್ಯಾಖ್ಯಾನ ಅರ್ಥಪೂರ್ಣವಾಗಿರುತ್ತಿತ್ತು.

Sunday, May 11, 2014

ಕನ್ನಡ, ಕಲಿಕಾ ಮಾಧ್ಯಮ, ಭಾಷಾಭಿಮಾನ: ಕೆಲವು ಟಿಪ್ಪಣಿಗಳು

ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದು ಸುಪ್ರೀಮ್  ಕೋರ್ಟಿನ ಸಂವಿಧಾನ ಪೀಠ ನೀಡಿದ ಮಹತ್ವದ ತೀರ್ಪಿನ ಕುರಿತಾದ ಸುದ್ದಿ ಪ್ರಕಟವಾದ ಮೇಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಮ್ಮ ಹಲವಾರು ಸಾಹಿತಿಗಳ, ಶಿಕ್ಷಣ ತಜ್ಞರ, ಭಾಷಾ ಸಂಘಟನೆಗಳ ಸದಸ್ಯರ ವಲಯದಲ್ಲಿ ಸಾಕಷ್ಟು ಸಂಚಲನೆಯನ್ನೇ ಉಂಟುಮಾಡಿದೆ. 

ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಲಿಕಾ ಮಾಧ್ಯಮವನ್ನಾಗಿ ಮಾತೃಭಾಷೆಯನ್ನು ಕಡ್ಡಾಯಗೊಳಿಸುವ ಕುರಿತು ಕರ್ನಾಟಕ ಸರ್ಕಾರ ಇಪ್ಪತ್ತು ವರುಷಗಳಷ್ಟು ಹಿಂದೆ ಆದೇಶ ಹೊರಡಿಸಿದ್ದು, ಆ ಆದೇಶವನ್ನು ಪ್ರಶ್ನಿಸಿ ಕೆಲವು  ಖಾಸಗಿ ಶಾಲೆಗಳು ಮತ್ತು ಪೋಷಕರ ಸಂಘಟನೆಗಳು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು. ಅಲ್ಲಿಂದ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನಂತರದಲ್ಲಿ ಸಂವಿಧಾನ ಪೀಠಕ್ಕೆ ವರ್ಗವಾಗಿ, ಇದೀಗ ಸಂವಿಧಾನ ಪೀಠದ ತೀರ್ಪು ಹೊರಬಿದ್ದಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಈ ವಿಚಾರ ಸದ್ಯಕ್ಕೆ ಒಂದು ರೀತಿಯ ಅಂತ್ಯ ಕಂಡಿದೆ ಎನ್ನಬಹುದೇನೋ.

ಈ ಸುದ್ದಿಗೆ ಜನರ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲ ಇತ್ತು. ಮೊದಲು ಎದುರಾದ ನನ್ನ ಹೆಂಡತಿಗೆ ಕೋರ್ಟಿನ ತೀರ್ಪಿನ ವಿಷಯ ತಿಳಿಸಿ, ಅವಳ ಅಭಿಪ್ರಾಯವೇನೆಂದು ಕೇಳಿದೆ. 'ತೀರ್ಪು ಸರಿಯಾಗಿಯೇ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಭಿಮಾನಕ್ಕಾಗಿ ಭಾಷೆಯನ್ನು ಆರಿಸಿಕೊಂಡು ಆ ಕಾರಣದಿಂದಲೇ ಉಳಿದವರಿಗಿಂತ ಹಿಂದಾಗಬೇಕಿಲ್ಲ. ಹೀಗಾಗಿ ಆಯ್ಕೆಯ ಸ್ವಾತಂತ್ರ್ಯ ಪೋಷಕರಿಗೇ ಬಿಡುವುದು ಸರಿ' ಎನ್ನುವುದು ಅವಳ ಅಭಿಪ್ರಾಯವಾಗಿತ್ತು.

ಮೇಲುನೋಟಕ್ಕೆ ಬಹುಶಃ ಇದು ಬಹಳ ಜನರ, ಮುಖ್ಯವಾಗಿ ಪೋಷಕರುಗಳ, ಅಭಿಪ್ರಾಯವೂ ಆಗಿರಬಹುದು. ಆದರೂ ಈ ವಿಚಾರ ಮತ್ತೆ ಮತ್ತೆ ಮನಸ್ಸಿನಲ್ಲಿ ಸುಳಿಯುತ್ತಿತ್ತು. ಕಲಿಕಾ ಮಾಧ್ಯಮದ ಪ್ರಶ್ನೆ ಸರಳವಾದ ಪ್ರಶ್ನೆಯಲ್ಲವೆಂಬುದೇನೋ ಈ ಹಿಂದೆಯೂ ನನ್ನ ಅರಿವಿಗೆ ಬಂದಿತ್ತು. ಇದರಲ್ಲಿರುವ ವಿವಿಧ ಆಯಾಮಗಳೇನು ಎನ್ನುವುದರ ಬಗೆಗೆ ನಾನು ಇನ್ನಷ್ಟು ಸ್ಪಷ್ಟತೆ ಪಡೆಯಬೇಕಾಗಿತ್ತು.

ಯೋಚಿಸುತ್ತಾ ಹೋದಂತೆ ಸಮಸ್ಯೆಯ ಜಟಿಲತೆ ಅರಿವಿಗೆ ಬರತೊಡಗಿತು. ನಾಡಿಗೆ ಸಮಾಜಕ್ಕೆಸಂಬಂಧಪಡುವ ಯಾವ ಸಮಸ್ಯೆಯೂ ಸರಳವಾಗಿರುವುದಿಲ್ಲ ಎನ್ನುವ ಸತ್ಯ ನಾವು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ  ಸಂಗತಿ. ಸುಪ್ರೀಂ ಕೋರ್ಟ್ ಆದೇಶದ ನಂತರದ ಈ ಕೆಲದಿನಗಳಲ್ಲಿ ಪತ್ರಿಕೆಗಳಲ್ಲಿ ಕಂಡು ಬರುತ್ತಿರುವ ಪ್ರತಿರೋಧ ನೋಡಿದರೆ ಕಲಿಕಾ ಮಾಧ್ಯಮದ ವಿಚಾರ ಒಂದು ನೇರ ಪರಿಹಾರವುಳ್ಳ ಸರಳ ಸಮಸ್ಯೆಯೇನೋ ಎಂಬ ಧಾಟಿಯಲ್ಲಿ ಪ್ರತಿಕ್ರಿಯೆಗಳು ಇರುವಂತೆ ತೋರುತ್ತದೆ.

ಕಲಿಕಾ ಮಾಧ್ಯಮದ ವಿಚಾರಕ್ಕೆ ತಳಕು ಹಾಕಿಕೊಂಡಂತೆ ಇತರ ಅನೇಕ ವಿಚಾರಗಳೂ ಇವೆ. ಒಂದೊಂದಾಗಿ ಪರಿಗಣಿಸಿದರೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗಬಹುದು. ಇಂತಹ ವಿಚಾರಗಳು ಪ್ರತಿಯೊಬ್ಬರಿಗೂ ತಮ್ಮದೇ ವೈಯಕ್ತಿಕ ದೃಷ್ಟಿಕೋನಕ್ಕೆ ಅನುಸಾರವಾಗಿ ಗೋಚರವಾಗುವಂತಹವು. ನಮ್ಮ ನಿರ್ದಿಷ್ಟ ಹಿನ್ನೆಲೆ, ಸನ್ನಿವೇಶ, ಉದ್ದೇಶ ಇವುಗಳಿಗೆ ಅನುಸಾರವಾಗಿಯೇ ನಮ್ಮ ಅಭಿಪ್ರಾಯಗಳು ಇರುವುದೂ ಸಹಜ.

೧. ಕಲಿಕಾ ಮಾಧ್ಯಮವಾಗಿ ಮಾತೃಭಾಷೆ
ನಾನು ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದದ್ದು ನನ್ನ ಮಾತೃಭಾಷೆಯಾದ  ಕನ್ನಡದ ಮಾಧ್ಯಮದಲ್ಲಿ. ಆ ಕಾಲಕ್ಕೆ ಕಲಿಕಾ ಮಾಧ್ಯಮ ಈಗಿನಂತೆ ಚರ್ಚೆಯ ವಿಷಯವೇ ಆಗಿರಲಿಲ್ಲ. ಪುಟ್ಟ ಹಳ್ಳಿಯ ಏಕ ಶಿಕ್ಷಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ 'ಒಂದು ಎರಡು ಬಾಳೆಲೆ ಹರಡು ಮೂರು ನಾಕು ಅನ್ನ ಹಾಕು' ಎಂದು ಗುಂಪಿನಲ್ಲಿ ಹಾಡುತ್ತಾ ಹತ್ತರವರೆಗೆ ಎಣಿಸಲು ಕಲಿತದ್ದು 'ಶಿಕ್ಷೆ' ಎನಿಸುವುದು ಸಾಧ್ಯವೇ ಇರಲಿಲ್ಲ. ಏಳನೇ ತರಗತಿಯವರೆಗೂ ವಿಜ್ಞಾನ, ಗಣಿತ, ಸಮಾಜ  ಶಾಸ್ತ್ರ  ಈ ಎಲ್ಲ ವಿಷಯಗಳ ಪರಿಚಯವಾದದ್ದೂ ಕನ್ನಡದಲ್ಲೇ.  ನಮಗೆ ಆಗಲೇ ತಿಳಿದಿರುವಂತಹದರ ಬಗ್ಗೆ ಇನ್ನಷ್ಟು ಅರಿವನ್ನು ಪೇರಿಸುತ್ತ ಹೋಗುವುದೇ ನಾವು ಯಾವುದೇ ವಿಷಯವನ್ನು ಕಲಿಯುವ ಮಾರ್ಗ ಆಗಿರುವುದರಿಂದ ಇದು ನಮ್ಮದೇ  ಭಾಷೆಯಲ್ಲಿ ಹೆಚ್ಚು ಸರಾಗ. ಕಿರಿಯ ತರಗತಿಗಳಲ್ಲಿ ನಮ್ಮ ನಿತ್ಯದ ಭಾಷೆಯಲ್ಲದ ಇಂಗ್ಲಿಷ್ ನಂತಹ ಭಾಷೆಯಲ್ಲಿ ಬೋಧಿಸುವ ವಿಷಯಗಳು ಬಹುಪಾಲು ಗ್ರಹಿಕೆಯ ಹೊರಗೇ ಉಳಿದು ಪರೀಕ್ಷಾ ದೃಷ್ಟಿಯಿಂದ ಕೇವಲ ನೆನಪಿನ ಶಕ್ತಿಯಿಂದ ಪುನರುಚ್ಛರಿಸುವ 'ಗಿಳಿಪಾಠ' ಗಳಾಗುವ ಸಾಧ್ಯತೆಯಿರುತ್ತದೆ.

ಅಲ್ಲದೆ, ನಮ್ಮ ಆಲೋಚನೆ, ಅಭಿವ್ಯಕ್ತಿ ಗಳು ಸಾಧ್ಯವಾಗುವುದೇ ಒಂದು ಭಾಷೆಯ ಆಧಾರದಿಂದ. ನಮ್ಮದಲ್ಲದ ಭಾಷೆಯಲ್ಲಿ ಬೋಧಿಸುವುದರಿಂದ ಅಲ್ಲಿ ಭಾಷೆ ಕೇವಲ ಮಾಹಿತಿ ವರ್ಗಾವಣೆಯ ಸಾಧನವಾಗುತ್ತದೆ. ಹೀಗೆ ಮಾಡುವುದರಿಂದ ಭಾಷೆಯ ಮೂಲಭೂತ ಸತ್ತ್ವದಿಂದಲೇ ನಾವು ವಂಚಿತರಾದಂತೆ. ಭಾಷೆಯೊಂದರ ಅಪರಿಮಿತ ಸಾಧ್ಯತೆಗಳು, ಅದು ತೆರೆದು ತೋರಬಹುದಾದ ದೊಡ್ಡದೊಂದು ಒಳ ಪ್ರಪಂಚ ಇವೆಲ್ಲವೂ ನಮಗೆ ಮುಖ್ಯವಾಗಲೇಬೇಕಾಗುತ್ತದೆ.  ಕೇವಲ ಮಾಹಿತಿ ಸಂವಹನೆಯ ಮಾಧ್ಯಮವಾಗಿ ಭಾಷೆಯೊಂದಿಗೆ ನಮ್ಮ ಸಂಬಂಧವಾಗುವುದಾದರೆ ಜರ್ಮನ್ ತತ್ತ್ವಜ್ಞಾನಿ ಹೇಡೆಗರ್ ಹೇಳಿದಂತೆ "ಭಾಷೆಯೇ ಮನುಷ್ಯನನ್ನು ಮಾತಾಡಿದಂತೆ" ಆಗುತ್ತದೆ.

ಹೀಗೆ ನಮ್ಮದೇ ಭಾಷೆಯೊಡನೆ ನೋಡುವ, ಆಲೋಚಿಸುವ, ಅರ್ಥ ಮಾಡಿಕೊಳ್ಳುವ ಸಂಬಂಧ ನಮಗೆ ಸಾಧ್ಯವಾದರೆ ಮುಂದೆ ಇಂಗ್ಲಿಷ್ನಂತಹ ಬೇರೊಂದು ಭಾಷೆಯಲ್ಲೂ  ಉತ್ತಮವಾದದ್ದರ ಪ್ರಯೋಜನ ಪಡೆಯುವುದೂ ಸಾಧ್ಯವಾಗುತ್ತದೆ.

ಯಾವುದೇ ಕಾರಣದಿಂದ ಕನ್ನಡ ಕಲಿಕಾ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸಲು ಇಷ್ಟವಿಲ್ಲದ ಪೋಷಕರೂ ಆ ಮಕ್ಕಳಿಗೆ ಕನಿಷ್ಟ ಹತ್ತನೇ ತರಗತಿಯವರೆಗಾದರೂ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

೨. ಇಂಗ್ಲಿಷ್ ಮೀಡಿಯಮ್ ಬೇಡಿಕೆ ಏಕೆ?
ಮುಖ್ಯವಾದ ಕಾರಣ ಉದ್ಯೋಗದ ದೃಷ್ಟಿ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಕಳೆದ ಕೆಲ ದಶಕಗಳಲ್ಲಿ ಬಂಡವಾಳಶಾಹಿ, ಜಾಗತೀಕರಣ, ನಗರೀಕರಣ, ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾದ  ಉದ್ಯೋಗಗಳ  ಸೃಷ್ಟಿ   ಹೆಚ್ಚಿದಂತೆಲ್ಲ  ಸಹಜವಾಗಿಯೇ ಎಲ್ಲರೂ  ಈ ಬಗೆಯ ಉದ್ಯೋಗಗಳನ್ನು ತಮ್ಮ ಮಕ್ಕಳೂ ಪಡೆಯಲೆಂಬ ಹಂಬಲವನ್ನು ಹೊಂದಲು ತೊಡಗಿದರು. ಹೀಗಾಗಿ  ಇಂಗ್ಲಿಷ್ ಮಾಧ್ಯಮದ ಬೇಡಿಕೆಯೂ ಇನ್ನಷ್ಟು ಅಧಿಕವಾಗತೊಡಗಿತು. ಪ್ರಾಥಮಿಕ  ಹಂತದಿಂದಲೇ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಪ್ರವೃತ್ತಿಯೂ ಹೆಚ್ಚಾಗತೊಡಗಿತು.

ವೈಯಕ್ತಿಕವಾಗಿ ಹೇಳುವುದಾದರೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದದ್ದು ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಳಿಸಲು ಅಥವಾ ನಿರ್ವಹಿಸಲು ನನಗೆ  ತೊಡಕಾಗಲಿಲ್ಲ. ತೊಂಬತ್ತರ ದಶಕದಿಂದ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯತೊಡಗಿದ ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶದ ಫಲಾನುಭವಿಗಳಾಗಿರುವ ನನ್ನಂತಹ ಇತರ ಹಲವಾರು ಕನ್ನಡಿಗರ ಅನುಭವವೂ ಬಹುಶಃ ಇದಕ್ಕಿಂತ ಭಿನ್ನವಾದದ್ದೇನೂ ಅಲ್ಲ. ಆರಂಭದ ಶಿಕ್ಷಣ ಮಾತೃಭಾಷೆಯಲ್ಲಿ ಪಡೆದದ್ದರಿಂದ  ಖಂಡಿತವಾಗಿ ಅನುಕೂಲವೇ ಆಗಿದೆ. ಏಕೆಂದರೆ ನನ್ನ ಮಟ್ಟಿಗೆ ಇಂಗ್ಲಿಷ್ ಭಾಷೆ ಕೇವಲ ಮಾರುಕಟ್ಟೆಯ ಭಾಷೆಯೂ , ತಂತ್ರಜ್ಞಾನದ ಸಾಧನ ರೂಪವೂ ಆಗದೇ ಉಳಿದಿದ್ದರೆ ಅದಕ್ಕೆ ಕಾರಣ ನನ್ನ ಆರಂಭದ ಶಿಕ್ಷಣ ನನ್ನದೇ ಭಾಷೆಯಲ್ಲಿದ್ದು  ನನ್ನ ಮನಸ್ಸನ್ನು ತೊಡಗಿಸಿಕೊಳ್ಳುವಂತಹದ್ದು ಆಗಿದ್ದದ್ದು ಹಾಗೂ ಭಾಷೆಯ ಸಾಧ್ಯತೆಗಳ ಅರಿವು ಚಿಕ್ಕಂದಿನಲ್ಲೇ ಲಭಿಸಿದ್ದು.

೩. ಭಾಷಾಭಿಮಾನ
 ಐಟಿ-ಬಿಟಿ ಯವರಿಂದ ಕನ್ನಡದ ಅವನತಿಯಾಗುತ್ತಿದೆ, ಇಂತಹ ಕ್ಷೇತ್ರಗಳ ಆಕಾಂಕ್ಷಿಗಳಿಗಾಗಿಯೇ ಆಂಗ್ಲ ಮಾಧ್ಯಮದ ಶಾಲೆ­­ಗಳನ್ನು ತೆರೆದಿರುವ ಶಿಕ್ಷಣದ ವ್ಯಾಪಾರಸ್ಥರಿಂದ ಹಾನಿಯಾಗುತ್ತಿದೆ ಎಂದು ಭಾವೋದ್ವೇಗದಿಂದ ಮಾತನಾಡುವುದರಿಂದ ಕನ್ನಡಕ್ಕೆ ಲಾಭವಾಗುವ ಸಾಧ್ಯತೆಗಳು ಕಡಿಮೆ. ಇನ್ನೂ ಮೂಲಭೂತವಾಗಿ ಯೋಚಿಸುತ್ತ ಜಾಗತೀಕರಣ, ಬಂಡವಾಳಶಾಹಿಯಂತಹ ಬೆಳವಣಿಗೆಗಳನ್ನು ಟೀಕಿಸುತ್ತಾ ಕೂರುವುದರಿಂದಲೂ ಉಪಯೋಗವಿಲ್ಲ. ಟೀಕೆಗಳನ್ನು ಮಾಡುವ ಮೊದಲು ಇಂತಹ ಬೆಳವಣಿಗೆಗಳ ಹಿಂದಿನ ರಾಜಕೀಯ, ಆರ್ಥಿಕ ಸತ್ಯಗಳನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯದು.

ಯಾವುದೇ ಸಾಮಾಜಿಕ ಅಥವಾ ಆರ್ಥಿಕ ವ್ಯವಸ್ಥೆ ಸರ್ವರಿಗೂ ಸಲ್ಲುವುದು ಸಾಧ್ಯವಾಗದ ಮಾತು. ವ್ಯವಸ್ಥೆಯಲ್ಲಿರುವ ಉತ್ತಮ ಅಂಶಗಳ ಲಾಭ ಪಡೆಯುತ್ತಾ, ಉತ್ತಮವಲ್ಲದ ಅಂಶಗಳನ್ನು ಆಡಳಿತಾತ್ಮಕವಾಗಿ ನಿಭಾಯಿಸುವುದಷ್ಟೇ ನಾವು ಮಾಡಬಹುದಾದದ್ದು. ಐಟಿ-ಬಿಟಿ ಕ್ಷೇತ್ರವನ್ನು ಹಾಗೂ ಅದರಲ್ಲಿರುವವರನ್ನೂ ಸಾರಾಸಗಟಾಗಿ ಸಂಸ್ಕೃತಿ ಭ್ರಷ್ಟರೆಂದೂ ಭಾಷಾ ವಿರೋಧಿಗಳೆಂದೂ ಜರೆಯುವುದು ನ್ಯಾಯವಲ್ಲ.

ವಸಾಹತುಶಾಹಿಗೆ ಸಾಧನವಾಗಿ ಇಂಗ್ಲಿಷ್ ನಮ್ಮ ದೇಶಕ್ಕೆ ಕಾಲಿಟ್ಟು ದೇಶೀಯ ಸಂಸ್ಕೃತಿ ನಾಶಪಡಿಸಿತು ಎಂದು ಹೇಳುವಂತೆ ಐಟಿ-ಬಿಟಿ ಬಂದು ಕನ್ನಡವನ್ನು ನಾಶ ಮಾಡಿತೆಂದು ಹೇಳಲಾಗದು. ಐಟಿ-ಬಿಟಿ ಬಂದಿರುವುದು ನಮ್ಮ ಮತ್ತು ನಮ್ಮ ಸರ್ಕಾರಗಳ ಆಹ್ವಾನದಿಂದಲೇ. ಅದು ಹೇಗೆಯೇ ಪ್ರವೇಶಿಸಿದ್ದರೂ ಇಂಗ್ಲಿಷ್ ಭಾಷೆಯ ಸಂಪರ್ಕದಿಂದ ಕನ್ನಡ ಭಾಷೆಗೂ ಲಾಭವಾಗಿಲ್ಲ ಎಂದೂ  ಹೇಳಲಾಗದು. ಹಾಗೆಯೇ ಐಟಿ-ಬಿಟಿ ಕ್ಷೇತ್ರದಿಂದ ನಾಡಿಗೇನೂ ಲಾಭವೇ ಆಗಿಲ್ಲ ಎನ್ನುವುದೂ ಸತ್ಯವಲ್ಲ. ಆರ್ಥಿಕವಾಗಿ ಲಾಭದಾಯಕವಾದ ಈ ಉದ್ಯಮದಿಂದ ಭಾಷೆಯ ಮೇಲಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ನಿಯಂತ್ರಿಸುವುದರತ್ತ ನಾವು ಗಮನ ಹರಿಸುವುದು ಒಳಿತು.

ಆಧುನಿಕ ಕಾಲದ ಅಗತ್ಯಗಳಿಗೆ ಹೊಂದುವಂತೆ ಪಠ್ಯಕ್ರಮದಲ್ಲಿ, ಬೋಧನಾ ಕ್ರಮದಲ್ಲಿ ಬದಲಾವಣೆಗಳನ್ನು ತರುವುದು, ಇಂಗ್ಲಿಷ್ ಬಗ್ಗೆ ಅನಗತ್ಯ ಹೆಮ್ಮೆ, ಕನ್ನಡದ ಬಗ್ಗೆ ನಿರಾಧಾರದ ಅಗೌರವ ಎರಡನ್ನೂ  ಹೋಗಲಾಡಿಸುವಂತೆ ಕನ್ನಡವನ್ನು, ಕನ್ನಡ ಶಾಲೆಗಳನ್ನು ಆಕರ್ಷಕವಾಗಿಸುವುದು  ಇವು ನಮ್ಮ ಸರ್ಕಾರ ಮಾಡಬಹುದಾದ ಹಾಗೂ ಕನ್ನಡವನ್ನು ಪ್ರೀತಿಸುವ ಎಲ್ಲರೂ ಮಾಡಬಹುದಾದ ಕೆಲಸಗಳು.

ಮತ್ತೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯಕ್ಕೆ ಬರುವುದಾದರೆ,- ಭಾಷೆಯ ಆಯ್ಕೆ, ಕಲಿಕಾ ಮಾಧ್ಯಮದ ಆಯ್ಕೆ ಇಂತಹ ವಿಚಾರಗಳಲ್ಲಿ ಕಾನೂನು, ಕಟ್ಟಳೆಯ ಮಾರ್ಗಕ್ಕಿಂತ ಜನರಲ್ಲಿ ಈ ವಿಚಾರದ ಸಾಧಕ-ಬಾಧಕಗಳ ಪರಿಚಯ ಮಾಡಿಕೊಡುವ ಮಾರ್ಗ ಒಳ್ಳೆಯದು.